ADVERTISEMENT

ಶಿರಸಿ: ಕಾಡುವ ಹಸಿರು ಮರಗಳ ನೆನಪು

ಬಿಸಿಲ ಬೇಗೆ: ತಂಪು ಪಾನೀಯಗಳಿಗೆ ಹೆಚ್ಚುತ್ತಿರುವ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 15:33 IST
Last Updated 1 ಏಪ್ರಿಲ್ 2022, 15:33 IST
ಶಿರಸಿ ನಗರದ ಅಬಕಾರಿ ಭವನದ ಎದುರು ಮರದ ನೆರಳಿನಿಂದ ತಂಪಾಗಿರುತ್ತಿದ್ದ ಪ್ರದೇಶ ಈಗ ಬಿಸಿಲ ಬೇಗೆ ಎದುರಿಸುತ್ತಿದೆ
ಶಿರಸಿ ನಗರದ ಅಬಕಾರಿ ಭವನದ ಎದುರು ಮರದ ನೆರಳಿನಿಂದ ತಂಪಾಗಿರುತ್ತಿದ್ದ ಪ್ರದೇಶ ಈಗ ಬಿಸಿಲ ಬೇಗೆ ಎದುರಿಸುತ್ತಿದೆ   

ಶಿರಸಿ: ಮಲೆನಾಡಿನ ಶಿರಸಿ ನಗರದಲ್ಲಿ ಬಿಸಿಲಿ ಬೇಗೆಗೆ ಜನರು ಬಸವಳಿದಿದ್ದಾರೆ. ಸೆಖೆಗೆ ಕಂಗೆಟ್ಟ ಜನರಿಗೆ ರಸ್ತೆ ವಿಸ್ತರಣೆಗೆ ಬಲಿಯಾದ ಮರಗಳ ನೆನಪು ಬಾಧಿಸತೊಡಗಿದೆ.

ನಗರದಲ್ಲಿ ಸರಾಸರಿ 34 ರಿಂದ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಕಳೆದ ಒಂದು ವಾರದಿಂದ ಸೆಖೆ ವಿಪರೀತವಾಗುತ್ತಿದ್ದು ತಂಪುಪಾನೀಯ, ಐಸ್‍ಕ್ರೀಮ್‍ಗಳ ಮಾರಾಟ ಹೆಚ್ಚುತ್ತಿದೆ. ಬೀದಿ ಬದಿಯಲ್ಲಿ ಎಳನೀರು ಮಾರಾಟ ಜೋರಾಗಿದೆ.

ಮಾರಿಕಾಂಬಾ ಜಾತ್ರೆ ವೇಳೆಯಲ್ಲೂ ತಂಪುಪಾನೀಯಗಳ ವಹಿವಾಟು ಹೆಚ್ಚಿತ್ತು. ನಿತ್ಯ ಸಂಜೆ ಮೋಡ ಕವಿದ ವಾತಾವರಣವಿದ್ದರೂ ಸೆಖೆಯ ವಾತಾವರಣದಿಂದ ಐಸ್‍ಕ್ರೀಮ್ ಪಾರ್ಲರ್‌ಗಳಲ್ಲಿ ಜನ ಜಂಗುಳಿ ಹೆಚ್ಚುತ್ತಿದೆ. ಹೋಟೆಲ್‍ಗಳಲ್ಲಿಯೂ ಎಳನೀರು, ಕೋಕಂ ಸೇರಿದಂತೆ ಪಾನೀಯಗಳ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.

ADVERTISEMENT

‘ರಸ್ತೆ ವಿಸ್ತರಣೆಗೆ ಯಲ್ಲಾಪುರ ನಾಕಾದಿಂದ ರಾಘವೇಂದ್ರ ವೃತ್ತದವರೆಗಿನ ನೂರಾರು ಮರಗಳನ್ನು ಕಡಿದು ಹಾಕಲಾಯಿತು. ಬೇಸಿಗೆಯಲ್ಲಿ ಈ ಮರಗಳು ತಾಪಮಾನ ನಿಯಂತ್ರಿಸಲು ಸಹಕಾರಿಯಾಗಿದ್ದವು’ ಎಂದು ಚಿಪಗಿ ನಿವಾಸಿ ಗುರುಪ್ರಸಾದ್ ಮರಗಳ ನೆನಪು ಸ್ಮರಿಸಿಕೊಂಡರು.

‘ಯಲ್ಲಾಪುರ ನಾಕಾದಿಂದ ಐದು ರಸ್ತೆ ವೃತ್ತದವರೆಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ನಾಲ್ಕುನೂರಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಆತಂಕವಿದೆ. ಈಗಲೇ ಬಿಸಿಲ ಬೇಗೆಗೆ ಜನರು ಬಸವಳಿದಿದ್ದಾರೆ. ಇನ್ನಷ್ಟು ಮರಗಳನ್ನು ಕಡಿಯುವ ಬದಲು ಅದನ್ನು ಉಳಿಸುವ ಬಗ್ಗೆ ಚಿಂತಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.