ಆಲಮಟ್ಟಿ: ‘ಯಲಗೂರು ಆಂಜನೇಯ ದೇವಸ್ಥಾನವನ್ನು ಪಾರಂಪರಿಕ ಹಾಗೂ ಪ್ರವಾಸಿ ಸ್ಥಳವನ್ನಾಗಿ ರೂಪಿಸಲು ₹ 20 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಎಆರ್) ಸಿದ್ಧಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಸಮೀಪದ ಯಲಗೂರದ ಹನುಮಾನ ದೇವಸ್ಥಾನದಲ್ಲಿ ಸೋಮವಾರ ನಡೆದ ವರಣಾವತಿ ಪವಮಾನ ಹೋಮದಲ್ಲಿ ಪೂರ್ಣಾಹುತಿ ನೀಡಿ, ಪೂಜೆ ಸಲ್ಲಿಸಿ ಅವರು ಮಾತನಾಡಿದರು.
’ಶಾಸಕ ಸಿ.ಎಸ್.ನಾಡಗೌಡ ಹಾಗೂ ಈ ಭಾಗದ ಭಕ್ತರ ಬೇಡಿಕೆಗೆ ಸ್ಪಂದಿಸಿ ಡಿಪಿಆರ್ ಮಾಡಲು ಸೂಚಿಸಲಾಗಿದೆ. ಡಿಪಿಆರ್ ಮಾಡುವಾಗ ಸ್ಥಳೀಯ ಭಕ್ತರ ಸಲಹೆ ಪಡೆದು ಅಂತಿಮಗೊಳಿಸಿ, ನಂತರ ಅನುದಾನ ಬಿಡುಗಡೆಗೊಳಿಸಲಾಗುವುದು. ಆಡಳಿತ ಮನೆ ಬಾಗಿಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ವಿವಿಧ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ’ ಎಂದರು.
ಪವಮಾನ ಹೋಮ: ₹20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಡಿಪಿಆರ್ಗೆ ಸೂಚಿಸಿದ್ದರಿಂದ ಯಲಗೂರಿನ ಭಕ್ತರು ಸೇರಿ ಆಂಜನೇಯ ದೇವಸ್ಥಾನದಲ್ಲಿ ಸೋಮವಾರ ವರಣಾವತಿ ಪವಮಾನ ಹೋಮ ಏರ್ಪಡಿಸಿದ್ದರು. ಬದರಿನಾರಾಯಣ ಚಿಮ್ಮಲಗಿ, ವಿಠ್ಠಲಾಚಾರ್ಯ ಗದ್ದನಕೇರಿ, ಗೋಪಾಲಾಚಾರ್ಯ ಹಿಪ್ಪರಗಿ ಸುಮಾರು 15ಕ್ಕೂ ಹೆಚ್ಚು ಆಚಾರ್ಯರ ನೇತೃತ್ವದಲ್ಲಿ ಪೂಜಾ ಕಾರ್ಯ ಜರುಗಿತು. ಹೋಮ ಕಾರ್ಯಕ್ರಮದಲ್ಲಿ ಸಚಿವ ಪಾಟೀಲ ಕೆಲಹೊತ್ತು ಪಾಲ್ಗೊಂಡರು. ಸಚಿವರು ಆಂಜನೇಯನಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು.
ಸಚಿವ ಪಾಟೀಲ, ಶಾಸಕ ಸಿ.ಎಸ್.ನಾಡಗೌಡ ಅವರನ್ನು ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಿದರು.
ಬದರಿನಾರಾಯಣ ಚಿಮ್ಮಲಗಿ, ನಾರಾಯಣ ಒಡೆಯರ, ಯಲಗೂರದಪ್ಪ ಪೂಜಾರಿ, ಭೀಮಣ್ಣ ಅವಟಗೇರ, ಗುಂಡಪ್ಪ ಪೂಜಾರಿ, ಶ್ರೀಶೈಲ ಡೆಂಗಿ, ಮಹಾಂತೇಶ ಡೆಂಗಿ, ಸಂತೋಷ ಪೂಜಾರಿ, ಆನಂದ ಪೂಜಾರಿ, ಗೋವಿಂದಪ್ಪ ಇದ್ದರು.
ಮನವಿ
ಮಲೆನಾಡು ಭಾಗದ ದೇವಸ್ಥಾನದ ಮಾದರಿಯಲ್ಲಿ ದೇವಸ್ಥಾನದ ಜೀರ್ಣೋದ್ದಾರ ಮುಖ್ಯರಸ್ತೆಯ ಮರುನಿರ್ಮಾಣ ಪಾರ್ಕಿಂಗ್ ವ್ಯವಸ್ಥೆ ಯಾತ್ರಿ ನಿವಾಸಕ್ಕೆ ಸೌಕರ್ಯ ಕಲ್ಪಿಸುವುದು ದೋಬಿ ಘಾಟ್ಪಾರ್ಕ್ ನಿರ್ಮಾಣ ಸೇರಿವಿವಿಧ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕು ಎಂದು ಯಲಗೂರೇಶ್ವರ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಸಚಿವ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.