ADVERTISEMENT

ಎಚ್.ಡಿ.ರೇವಣ್ಣ, ಕುಮಾರಸ್ವಾಮಿ ಮಧ್ಯೆ ಬಿರುಕು: ನಳಿನ್ ಕುಮಾರ್ ಕಟೀಲ್

‘ಹಾಸನಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಿಸಲು ಕುಟುಂಬ ರಾಜಕಾರಣ ಅಡ್ಡಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 15:50 IST
Last Updated 20 ಡಿಸೆಂಬರ್ 2022, 15:50 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಭಟ್ಕಳ: ‘ಎಚ್.ಡಿ.ರೇವಣ್ಣ ಹಾಗೂ ಕುಮಾರಸ್ವಾಮಿ ಮಧ್ಯೆ ಬಿರುಕು ಮೂಡಿದ್ದು, ಹಾಸನ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ಕುಮಾರಸ್ವಾಮಿ ಅವರಿಗೆ ಸಾಧ್ಯವಾಗಿಲ್ಲ’ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಮುರುಡೇಶ್ವರದಲ್ಲಿ ಮಂಗಳವಾರ ಆರಂಭವಾದ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಎಚ್.ಡಿ.‌ಕುಮಾರಸ್ವಾಮಿ ಜೆಡಿಎಸ್‌ನ 90 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಬಿಡುಗಡೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಕುಟುಂಬ ರಾಜಕಾರಣ ಇದಕ್ಕೆ ಅಡ್ಡಿಯಾಗಿದೆ’ ಎಂದರು.

‘ತುಷ್ಟೀಕರಣ ರಾಜಕೀಯಕ್ಕಾಗಿ ಜೆ.ಡಿ.ಎಸ್ ಪಕ್ಷದ ಕುಮಾರಣ್ಣ, ಒಂದು ಬಾರಿ ಮುಸ್ಲಿಂ‌ ಸಮುದಾಯವರು ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದರೆ, ಇನ್ನೊಂದು ಬಾರಿ ದಲಿತ ಸಮುದಾಯದವರು ಎನ್ನುತ್ತಿದ್ದಾರೆ. ಕುಮಾರಣ್ಣ ನೀವು ಮತ ಓಲೈಕೆಗಾಗಿ ರಾಜಕಾರಣ ಮಾಡಬೇಡಿ. ಇಂಥದ್ದೇ ಸಮುದಾಯದ ವ್ಯಕ್ತಿ ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಲೇ ಘೋಷಣೆ ಮಾಡುವ ಸಾಮರ್ಥ್ಯ ಇದೆಯಾ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.