ಕುಮಟಾ:‘ಎಲ್ಲ ರಂಗಗಳಲ್ಲಿ ಮುಂದೆ ಇರುವ ಹವ್ಯಕ ಸಮುದಾಯದ ಜನರಿಗೆ ತಮ್ಮ ಶಕ್ತಿಯ ಬಗ್ಗೆ ಇನ್ನೂ ಅರಿವಾಗಬೇಕಿದೆ. ಬಿಹಾರ ಮಾದರಿಯಲ್ಲಿ ಅವರು ಕೃಷಿ ಅಭಿವೃದ್ಧಿಪಡಿಸಬೇಕಿದೆ’ ಎಂದುನಿವೃತ್ತ ಪ್ರಾಧ್ಯಾಪಕ ಡಾ.ಜಿ.ವಿ.ಜೋಷಿ ಹೇಳಿದರು.
ಇಲ್ಲಿ ಸೋಮವಾರ ಆರಂಭವಾದ ಹವ್ಯಕ ವಿದ್ಯಾವರ್ಧಕ ಸಂಘದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮದುವೆಯಂಥ ವಿಚಾರದಲ್ಲಿ ಹವ್ಯಕ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ಕಿವಿಮಾತು ಹೇಳುವಂಥ ಸ್ಥಿತಿ ಈಗ ನಿರ್ಮಾಣವಾಗಿದೆ’ ಎಂದರು.
‘ಹವ್ಯಕ ಸಂಪ್ರದಾಯ ಮತ್ತು ವರ್ತಮಾನ’ ಕುರಿತು ಮಾತನಾಡಿದ ಡಾ.ಜಿ.ಎಸ್.ಹೆಗಡೆ, ‘ಹವ್ಯಕ ಸಮುದಾಯವನ್ನು ಉಳಿದವರು ನಂಬುವಂಥ ಪರಂಪರೆ ಮುಂದುವರಿಯಬೇಕಾಗಿದೆ. ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯುವಾಗ ಮದುಮಗಳಿಗೆ ಹೇಳುವ ನೀನು ಅನ್ನ ನೀಡಬೇಕು, ಆರೋಗ್ಯ ನೀಡಬೇಕು, ಸಂಪತ್ತು ನೀಡಬೇಕು, ಸಂತೋಷ ನೀಡಬೇಕು, ಸಂತಾನ ನೀಡಬೇಕು, ಮತ್ತೆ ಮಿತ್ರೆಯೂ ಆಗಿರಬೇಕು ಎನ್ನುವ ವಿಚಾರ ಇಂದು ಹವ್ಯಕರ ಮನೆ ಮನೆ ತಲುಪಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಟಿ.ಟಿ.ಹೆಗಡೆ, ‘ಸೂರ್ಯೋದಯಕ್ಕೆ ಮುನ್ನ ಹವ್ಯಕರ ಮನೆಗಳಲ್ಲಿ ಕಸ ಗುಡಿಸಿ ರಂಗೋಲಿ ಹಾಕುವ ಪರಂಪರೆ ಇತ್ತು. ಇಂದು ಕಸ ಗುಡಿಸಲು ಕೆಲಸದವರು ಬರಬೇಕಾಗಿದೆ. ಕೊಟ್ಟಿಗೆ ಕೆಲಸ ಮಾಡಲು ಕೆಲಸದವರು ಸಿಗದೆ ದನಕರುಗಳನ್ನು ಹೊರಗಡೆ ಬಿಡಲಾಗದೆ ಮನೆಗಳಲ್ಲಿ ಕೊಟ್ಟಿಗೆಯೇ ಮಾಯವಾಗುತ್ತಿದೆ. ಧ್ಯಾನ, ದಾನ, ಹೈನುಗಾರಿಕೆ, ಕೃಷಿ, ಆತಿಥ್ಯದಂಥ ಸಂಪ್ರದಾಯಗಳು ತಪ್ಪಿ ಹೋದರೆ ಮನಸ್ಸು ಉದ್ವಿಗ್ನಗೊಳ್ಳುತ್ತದೆ. ಮುಂದೆ ಅದೇ ಸಮಾಜದಲ್ಲಿ ಸಂಘರ್ಷ, ಅಶಾಂತಿಗೆ ನಾಂದಿಯಾಗುತ್ತದೆ. ಹವ್ಯಕರು ತಮ್ಮ ಮೂಲ ಆಚರಣೆಗಳನ್ನುರೂಢಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ಟಿ.ಪಿ.ಹೆಗಡೆ, ವಿದ್ವಾನ್ ಮಂಜುನಾಥ ಭಟ್ಟ, ವೆಂಕಟೇಶ ಭಟ್ಟ ವೇದಿಕೆಯಲ್ಲಿ ಇದ್ದರು. ಎಂ.ಎನ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ‘ಹವ್ಯಕಾಮೃತ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.