
ಕಾರವಾರ: ಹೋಳಿ ಹುಣ್ಣಿಮೆ ಸಮೀಪಿಸಿದ್ದು ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕರಡಿ ವೇಷ, ಸುಗ್ಗಿ ಕುಣಿತದ ಸಡಗರ ಇಮ್ಮಡಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಕುಣಿತದ ತಂಡಗಳ ಪ್ರದರ್ಶನ ಗಮನ ಸೆಳೆಯುತ್ತಿದ್ದರೆ, ನಗರದಲ್ಲಿ ಕರಡಿ ವೇಷ ತೊಟ್ಟು ಓಡಾಡುವ, ಯುವಕರನ್ನು ಹಿಮ್ಮಟ್ಟಿಸಿ ತಮಾಷೆ ಮಾಡುವ ಕರಡಿ ವೇಷಗಳು ಗಮನಸೆಳೆಯುತ್ತಿವೆ. ಜೊತೆಗೆ ವಿವಿಧ ವೇಷಗಳನ್ನು ತೊಟ್ಟು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುವ ಆಚರಣೆ ನಡೆಯುತ್ತಿದೆ.
ಬಣ್ಣ ಬಣ್ಣದ ರೋಮಗಳನ್ನು ಅಂಟಿಸಿದ ಕರಡಿ ಹೋಲುವ ಧರಿಸು ಧರಿಸಿದ ಯುವಕರ ಗುಂಪು ಆಯಾ ಪ್ರದೇಶಗಳಲ್ಲಿ ಸುತ್ತಾಡುತ್ತದೆ. ಓಡುವಾಗ ಜನರನ್ನು ಎಚ್ಚರಿಸಲು ಸೊಂಟಕ್ಕೆ ಕಟ್ಟಿಕೊಂಡ ಗಂಟೆಯ ಸದ್ದು ಕೇಳಿದಾಕ್ಷಣ ಜನರು ಬೆಚ್ಚಿ ಓಡಲು ತೊಡಗುತ್ತಾರೆ.
‘ಬಿಸಿಲ ಝಳದಲ್ಲಿ ತೆಳುವಾದ ಬಟ್ಟೆ ಧರಿಸಿ ಓಡಾಡುವುದೇ ಕಷ್ಟವಾಗಿರುವಾಗ ಯುವಕರು ದಿನವಿಡೀ ದಪ್ಪನೆಯ ಕರಡಿ ವೇಷದ ಧಿರಿಸು ಧರಿಸಿ ಓಡಾಡುವುದು ಸವಾಲಿನ ಕೆಲಸ. ಸವಾಲಿನ ನಡುವೆಯೂ ಹೀಗೆ ಆಚರಿಸುವುದರ ಹಿಂದೆ ಹಣ ಸಂಪಾದನೆಯ ಉದ್ದೇಶವೂ ಇದೆ. ಹೋಳಿ ಹಬ್ಬಕ್ಕೆ ವಾರದ ಮೊದಲು ವೇಷ ಧರಿಸಿ ಯುವಕರು ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಸಂಪ್ರದಾಯವಿದೆ. ಹೀಗೆ ವೇಷ ಧರಿಸಿ ಬರುವವರಿಗೆ ಕರಿ ಮಕ್ಕಳು ಎನ್ನುತ್ತಾರೆ. ಕರಿ ಮಕ್ಕಳು ರಾವಣ, ರಾಕ್ಷಸ, ಕಾಮಣ್ಣ, ಸ್ತ್ರೀ ವೇಷ ಹೀಗೆ ನಾನಾ ವೇಷ ಧರಿಸಿ ಬರುವುದು ವಾಡಿಕೆ’ ಎನ್ನುತ್ತಾರೆ ಕೆಎಚ್ಬಿ ಕಾಲೊನಿಯ ನಾಗೇಂದ್ರ ಗುನಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.