ಹೊನ್ನಾವರ: ಪಿಗ್ಮಿ ಹಣ ಸಂಗ್ರಹಕಾರರ ವರಮಾನ ಅನಿಶ್ಚಿತವಾಗಿದ್ದು ಅವರ ಬದುಕು ಅಭದ್ರತೆಯಿಂದ ಕೂಡಿರುವುದರಿಂದ ಅವರಿಗೆ ನೀಡಲಾಗಿರುವ ಬಿ.ಪಿಎಲ್ ಕಾರ್ಡ್ ಸೌಲಭ್ಯವನ್ನು ರದ್ದುಪಡಿಸಬಾರದು' ಎಂದು ಆಗ್ರಹಿಸಿ ತಾಲ್ಲೂಕಿನ ಮಂಕಿಯ ಪಿಗ್ಮಿ ಸಂಗ್ರಹಕಾರರ ಸಂಘದ ವತಿಯಿಂದ ಬುಧವಾರ ಇಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
'ನಮ್ಮಲ್ಲಿ ಕೆಲ ಪಿಗ್ಮಿ ಸಂಗ್ರಹಕಾರರು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದಾರೆ. ಕಳೆದ 25-30 ವರ್ಷಗಳಿಂದ ವಿವಿಧ ಹಣಕಾಸು ಸಂಸ್ಥೆಗಳ ವತಿಯಿಂದ ಪಿಂಗ್ಮಿ ಸಂಗ್ರಹ ಮಾಡುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಸಂಸ್ಥೆ ನಮಗೆ ನಿರ್ದಿಷ್ಟ ವೇತನ, ನಿವೃತ್ತಿ ವೇತನ, ಗ್ರ್ಯಾಚುಟಿ ಮೊದಲಾದ ಸೌಲಭ್ಯ ನೀಡುವುದಿಲ್ಲ, ಬದಲಿಗೆ ಸಂಗ್ರಹಿಸಿದ ಹಣದ ಮೊತ್ತಕ್ಕೆ ಅನುಗುಣವಾಗಿ ಕಮಿಷನ್ ಮಾತ್ರ ನೀಡುವುದರಿಂದ ನಮ್ಮ ಆದಾಯ ಅನಿಶ್ಚಿತವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದರೆ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು ಕಾರ್ಡ್ ರದ್ದುಪಡಿಸಿದರೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಂಗ್ರಹಿಸಿದ ಹಣಕ್ಕೆ ಸಿಗುವ ಕಮಿಷನ್ ಕೂಡ ಕಡಿಮೆಯಾಗಿದ್ದು ಸಂಸಾರ ನಿರ್ವಹಣೆಯೇ ಕಷ್ಟವಾಗಿರುವಾಗ ಬಿಪಿಎಲ್ ಕಾರ್ಡ್ ಕೂಡ ರದ್ದುಪಡಿಸಿದರೆ ಇನ್ನಷ್ಟು ಅತಂತ್ರರಾಗುತ್ತೇವೆ ಎಂದು ಮನವಿಯಲ್ಲಿ ತಮ್ಮ ಕಷ್ಟ ವಿವರಿಸಿದ್ದಾರೆ.
ಸಂಘದ ಅಧ್ಯಕ್ಷ ಜುಜೆ ಫರ್ನಾಂಡಿಸ್, ಉಪಾಧ್ಯಕ್ಷ ಉದಯ ನಾಯ್ಕ, ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ, ರಾಘವೇಂದ್ರ ನಾಯ್ಕ, ಗಣಪತಿ ನಾಯ್ಕ, ಸತೀಶ ನಾಯ್ಕ, ರಾಮಕೃಷ್ಣ ಶೆಟ್ಟಿ, ಶೇಖರ ನಾಯ್ಕ, ಗಣಪಯ್ಯ ಗೌಡ, ಗಜಾನನ ನಾಯ್ಕ, ರಾಜೇಶ ಪ್ರಭು, ಶ್ಯಾಮಲಾ ಶೆಟ್ಟಿ, ನಾಗರಾಜ ನಾಯ್ಕ, ಕೃಷ್ಣ ಶೆಟ್ಟಿ, ಗಿರೀಶ ನಾಯ್ಕ, ಶ್ರೀಧರ ನಾಯ್ಕ, ಈಶ್ವರ ನಾಯ್ಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.