ಭಟ್ಕಳದ ಜಂಬರಮಠದ ರಾಮಾ ನಾಯ್ಕ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವುದು
ಭಟ್ಕಳ: ತಾಲ್ಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆ ಗಾಳಿಗೆ ಹಲವು ಕಡೆ ಮರ, ವಿದ್ಯುತ್ ಕಂಬ ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.
ಪಟ್ಟಣದ ಚೌಥನಿಯ ಕೀರ್ತಿ ನಗರದ ಜಟಕೇಶ್ವರ ದೇವಸ್ಥಾನದ ಮೇಲೆ ಬಾರಿ ಗಾತ್ರದ ಮರ ಬಿದ್ದು ದೇವಸ್ಥಾನದ ಚಾವಣಿ ಸಂಪೂರ್ಣ ಜಖಂಗೊಂಡಿದೆ. ಪಟ್ಟಣದ ಜಂಬರಮಠದ ನಿವಾಸಿ ರಾಮಾ ನಾಯ್ಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮರ ಬಿಳುವ ಸಮಯದಲ್ಲಿ ಮನೆಯ ಒಳಗಡೆ ಕುಟಂಬ ಸದಸ್ಯರಿದ್ದರೂ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೌಥನಿಯಿಂದ ಮುಂಡಳ್ಳಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಬೃಹದಾಕಾರದ ಮರ, ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದು, ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದಿದ್ದೆ.
ಪಟ್ಟಣದ ಬಸ್ತಿ ರೋಡ್ ನಲ್ಲಿ ಕೂಡ ಇದೇ ರೀತಿ ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದಿದೆ. ಗಾಳಿ ಬರುವ ಸಮಯದಲ್ಲಿ ಹೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ ಸಂಭವಿಸಬಹುದಾದ ಬಾರಿ ಅನಾಹುತ ತಪ್ಪಿದೆ.
ತಾಲ್ಲೂಕಿನಲ್ಲಿ ಮಳೆ ಗಾಳಿ ಆರ್ಭಟ ಮುಂದುವರೆದಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತ್ತಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.