ಮುಂಡಗೋಡ: ‘ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಜಗತ್ತಿನಲ್ಲಿ ಮಾನವ ಧರ್ಮ ಶ್ರೇಷ್ಠವಾಗಿದ್ದು, ಮಾನವೀಯ ಮೌಲ್ಯಗಳನ್ನು ಪಸರಿಸುವ ಮೂಲಕ ಜಗತ್ತಿನಲ್ಲಿ ಶಾಂತಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕಿದೆ’ ಎಂದು ಹಳೂರಿನ ವೇದಮೂರ್ತಿ ರುದ್ರಮುನಿ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸಹಯೋಗದಲ್ಲಿ ಇಲ್ಲಿನ ಕಾಳಗನಕೊಪ್ಪ ರಸ್ತೆಯ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ನಡೆದ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದು ಪರಿಷತ್ತಿನ ಸ್ಥಾಪನೆಯ ಷಷ್ಠಿ ವರ್ಷದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
‘ಧರ್ಮದ ರಕ್ಷಣೆಯಲ್ಲಿ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಧರ್ಮವನ್ನೂ ಗೌರವಿಸಬೇಕು. ಎಲ್ಲ ಧರ್ಮಗಳ ಸಾರ ಒಂದೇ ಆಗಿರುತ್ತದೆ. ಜೀವನದಲ್ಲಿ ಸತ್ಯವಂತರಾಗಿ ಬಾಳಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ’ ಎಂದರು.
ಬಾಲಕೃಷ್ಣನ ವೇಷಭೂಷಣದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಗಮನಸೆಳೆದರು.
ಓಂ ಗ್ಯಾಸ್ ಸರ್ವಿಸಸ್ ಮಾಲೀಕ ಬಸವರಾಜ ಓಶೀಮಠ, ವಿಶ್ವ ಹಿಂದು ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ತಂಗಮ ಚಿನ್ನನ್, ಅಯ್ಯಪ್ಪ ಭಜಂತ್ರಿ, ಭಜರಂಗದಳ ತಾಲ್ಲೂಕು ಸಂಚಾಲಕ ಶಂಕರ ಲಮಾಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಶೇಖರ ಲಮಾಣಿ, ಫಣಿರಾಜ ಹದಳಗಿ, ಹಿಂದು ಜಾಗರಣ ವೇದಿಕೆಯ ಪ್ರಕಾಶ ಬಡಿಗೇರ, ವಿಶ್ವನಾಥ ನಾಯರ, ರಾಜೇಶ ರಾವ್, ಮಂಜುನಾಥ ಎಚ್.ಪಿ.,ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.