ADVERTISEMENT

ಶಿರಸಿ: ಹಲಸಿನ ಮೇಳ ಜೂನ್‌ 5ರಂದು

​ಪ್ರಜಾವಾಣಿ ವಾರ್ತೆ
Published 27 ಮೇ 2025, 12:47 IST
Last Updated 27 ಮೇ 2025, 12:47 IST
ನಾರಾಯಣ ಹೆಗಡೆ ಗಡಿಕೈ
ನಾರಾಯಣ ಹೆಗಡೆ ಗಡಿಕೈ   

ಶಿರಸಿ: ಉತ್ತರ ಕನ್ನಡ ಜಿಲ್ಲಾ ಅಡಿಕೆ ಮತ್ತು ಸಾಂಬಾರು ಬೆಳೆಗಾರರ ಸಂಘ, ತೋಟಗಾರಿಕಾ ಇಲಾಖೆ, ಸಾವಯವ ಒಕ್ಕೂಟ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜೂನ್ 5 ಮತ್ತು 6ರಂದು ಹಲಸಿನ ಮೇಳವನ್ನು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ. 

ಈ ಕುರಿತು ಮಂಗಳವಾರ ಕದಂಬ ಮಾರ್ಕೆಟಿಂಗ್‍ನಲ್ಲಿ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ನೂರಕ್ಕೂ ಹೆಚ್ಚು ಹಲಸಿನ ಖಾದ್ಯಗಳ ಪ್ರದರ್ಶನ, ಕೃಷಿ ನವೋದ್ಯಮಿಗಳ ಉತ್ಪನ್ನಗಳ ಪ್ರದರ್ಶನ, ಎಪ್ಪತ್ತೈದಕ್ಕೂ ಹೆಚ್ಚು ಹಲಸಿನ ಕಾಯಿ– ತಳಿಗಳ ಪ್ರದರ್ಶನ, ಮಹಿಳೆಯರಿಗೆ ಹಲಸಿನ ಖಾದ್ಯ ಸ್ಪರ್ಧೆ, ಹಲಸಿನ ಉತ್ಪನ್ನಗಳ ಬ್ರಾಂಡ್ ಬಿಡುಗಡೆ, ನೂತನ ಉಪಕರಣ ಮತ್ತು ತಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ, ಗ್ರಾಮೀಣ ಗೃಹೋತ್ಪನ್ನ ಹಲಸಿನ ತಿಂಡಿ– ತಿನಿಸುಗಳ ಮಾರಾಟದ ವ್ಯವಸ್ಥೆ ಇರಲಿದೆ’ ಎಂದರು.

‘ಜೂನ್ 5ರಂದು ಸಂಜೆ 4 ಗಂಟೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಳ ಉದ್ಘಾಟಿಸುವರು. ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ‌ ವಹಿಸುವರು. ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಲಕ್ಷ್ಮೀನಾರಾಯಣ ಹೆಗಡೆಗೆ ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು’ ಎಂದರು. 

ADVERTISEMENT

ಜೂನ್‌ 6ರ ಬೆಳಿಗ್ಗೆ 10.30ರಿಂದ ವಿವಿಧ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ಸಮಾರೋಪ ನಡೆಯಲಿದ್ದು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ ಅಧ್ಯಕ್ಷತೆ ವಹಿಸುವರು. ಜೀವ ವೈವಿದ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ  ಅನಂತ ಹೆಗಡೆ ಅಶೀಸರ ಸಮಾರೋಪ ಭಾಷಣ ಮಾಡುವರು.

ಹೊಸ ತಲೆಮಾರಿನ ಕೃಷಿಕರ ಮುಂದಿರುವ ಅನನ್ಯ ಸಾಧ್ಯತೆಗಳು ಎನ್ನುವ ವಿಷಯ ಕುರಿತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ದಿವಾಕರ ಹೆಗಡೆ ಕೆರೆಹೊಂಡ ಅವರ ವಿಶೇಷ ಉಪನ್ಯಾಸವಿದೆ. ಇದೇ ಸಂದರ್ಭದಲ್ಲಿ  ಹಲಸಿನ ತಳಿ ಸಂರಕ್ಷಣೆ ಮಾಡಿರುವ ಉತ್ಸಾಹಿ ರೈತರಿಗೆ ಹಾಗೂ ಉದ್ಯಮಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹಲಸಿನ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪ್ರಮುಖರಾದ ಎಂ.ವಿ.ಹೆಗಡೆ, ಅನಂತ ಅಶೀಸರ, ಗಣೇಶ ಭಟ್ ಉಪ್ಪೋಣಿ, ರಮೇಶ ಹೆಗಡೆ ಕಾನಗೋಡ, ಸತೀಶ‌ ಹೆಗಡೆ, ವಿಶ್ವೇಶ್ವರ ಭಟ್ ಕೋಟೆಮನೆ, ವಿಕಾಸ ಹೆಗಡೆ, ಆದರ್ಶ ಹೆಗಡೆ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.