ಮುಂಡಗೋಡ: ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರವನ್ನು, ನಿಯಮಾವಳಿ ಉಲ್ಲಂಘಿಸಿರುವ ಆರೋಪದ ಮೇಲೆ ಶನಿವಾರದಿಂದ ಬಂದ್ ಮಾಡಿಸಲಾಗಿದೆ.
ಜನೌಷಧ ಕೇಂದ್ರದಲ್ಲಿ ನಿಗದಿಪಡಿಸಿದ ಔಷಧಗಳ ಜೊತೆಗೆ ದುಬಾರಿ ಬೆಲೆಯ ಔಷಧಗಳನ್ನು ಸಹ ಮಾರುತ್ತಿದ್ದಾರೆ ಎಂಬ ಸಾರ್ವಜನಿಕರ ಲಿಖಿತ ದೂರಿನ ಹಿನ್ನೆಲೆಯಲ್ಲಿ, ಈಚೆಗೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡವು ದಿಢೀರ್ ದಾಳಿ ಮಾಡಿ, ಪರಿಶೀಲಿಸಿದ್ದರು.
ದಾಳಿಯ ಸಂದರ್ಭದಲ್ಲಿ, ಜನೌಷಧ ಕೇಂದ್ರದಲ್ಲಿ ಜನೌಷಧಗಳು ಅಷ್ಟೇ ಅಲ್ಲದೇ, ಬೇರೆ ಔಷಧಗಳನ್ನೂ ಮಾರಾಟಕ್ಕೆ ಇಟ್ಟಿರುವುದು ಕಂಡುಬಂತು. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವರದಿ ನೀಡಲಾಗಿತ್ತು.
‘ಜನೌಷಧ ಕೇಂದ್ರದ ಮೇಲಿನ ದಾಳಿ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತು. ಈ ಕುರಿತು ಸರ್ಕಾರದ ಆದೇಶ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಆದೇಶದನ್ವಯ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿರುವ ಜನೌಷದ ಕೇಂದ್ರವನ್ನು ಶನಿವಾರದಿಂದ ಬಂದ್ ಮಾಡಲಾಗಿದೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.