ಜೊಯಿಡಾ ತಾಲ್ಲೂಕಿನ ಸುಪಾ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು ಜಲಾಶಯದ ಹಿನ್ನೀರು ರಸ್ತೆಯಲ್ಲಿ ಆವರಿಸಿದ್ದು ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಂಜೆ ಜನರ ಸಂಚಾರಕ್ಕೆ ಸೋಮವಾರ ದೋಣಿ ವ್ಯವಸ್ಥೆ ಮಾಡಲಾಗಿದೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸದಾನಂದ ಸಾವಂತ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
ಜೊಯಿಡಾ: ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಸುಪಾ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು ಜಲಾಶಯದ ಹಿನ್ನೀರು ರಸ್ತೆಯಲ್ಲಿ ಆವರಿಸಿ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸುಳ್ಳೆ ಗ್ರಾಮದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಕರಂಜೆ - ದುಧಮಳಾ ರಸ್ತೆ, ಅಸುಳ್ಳೆ ರಸ್ತೆ, ಹಾಗೂ ಕಾಳಪೆಯಲ್ಲಿ ಸೇತುವೆ ಸುತ್ತಲೂ ರಸ್ತೆಯಲ್ಲಿ ಜಲಾಶಯದ ಹಿನ್ನೀರು ತುಂಬಿದ್ದು ಕರಂಜೆ ಊರಿನ ಜನರು ಹೊರ ಭಾಗಕ್ಕೆ ಬರಲು ಪರದಾಡುತ್ತಿದ್ದಾರೆ.
ತಾಲ್ಲೂಕಿನ ಕ್ಯಾಸಲ್ ರಾಕ್ ಮೂಲಕ ಕರಂಜೆ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳಿಗಳಿಗೆ ಸೇತುವೆಗಳು ಇಲ್ಲದಿರುವುದರಿಂದ ಕರಂಜೆ, ಅಸುಳ್ಳೆ ಜನರು ಪರದಾಡುತ್ತಿದ್ದಾರೆ.
ಜನರ ಸಂಚಾರಕ್ಕೆ ಸದ್ಯ ದೋಣಿ ವ್ಯವಸ್ಥೆ ಮಾಡಲಾಗಿದೆ. ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಗ್ಗಿ ಭಾಗದ ಕರಂಜೆ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉಳವಿ - ಗೋವಾ ಗಡಿ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು ಜೊತೆಗೆ ಹೆದ್ದಾರಿಯಲ್ಲಿ ಹರಿಯುವ ಹಲವು ಹಳ್ಳಿಗಳಿಗೆ ಸೇತುವೆಗಳು ನಿರ್ಮಾಣ ಆಗದೇ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಈ ಭಾಗದ ಜನರು ಸಂಚಾರಕ್ಕೆ ಪರದಾಡುತ್ತಾರೆ. ಸೋಮವಾರ ಕೆಪಿಸಿ ವತಿಯಿಂದ ಗ್ರಾಮ ಪಂಚಾಯಿತಿ ಮೂಲಕ ಕರಂಜೆ ಊರಿನ ಜನರಿಗೆ ದೋಣಿ ವ್ಯವಸ್ಥೆ ಸೋಮವಾರದಿಂದ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.