ADVERTISEMENT

ಹಾಲಿ ಗ್ರಾ.ಪಂ ಸದಸ್ಯರೇ ಮುಂದುವರಿಯಲಿ

ಆಡಳಿತಾಧಿಕಾರಿಗಳಿಂದ ಆಡಳಿತ ಕಷ್ಟ: ಶಾಸಕ ಆರ್.ವಿ.ದೇಶಪಾಂಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 15:55 IST
Last Updated 20 ಜೂನ್ 2020, 15:55 IST
ಜೊಯಿಡಾದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಖಗವಸುಗಳನ್ನು ಶಾಸಕ ಆರ್.ವಿ.ದೇಶಪಾಂಡೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಮೂಲಕ ಶನಿವಾರ ವಿತರಿಸಿದರು
ಜೊಯಿಡಾದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಖಗವಸುಗಳನ್ನು ಶಾಸಕ ಆರ್.ವಿ.ದೇಶಪಾಂಡೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಮೂಲಕ ಶನಿವಾರ ವಿತರಿಸಿದರು   

ಜೊಯಿಡಾ: ‘ಆಡಳಿತಾಧಿಕಾರಿಗಳ ಮೂಲಕ ಗ್ರಾಮ ಪಂಚಾಯ್ತಿಗಳ ಆಡಳಿತ ನಡೆಸುವುದು ಕಷ್ಟ. ಆದ್ದರಿಂದ ಈಗಿರುವ ಜನಪ್ರತಿನಿಧಿಗಳಿಗೇಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯ್ತಿಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಹಾಲಿ ಇರುವ ಜನಪ್ರತಿನಿಧಿಗಳಿಗೇಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ, ಅವರ ಅನುಭವದ ಲಾಭ ಗ್ರಾಮ ಪಂಚಾಯ್ತಿಗಳಿಗೆ ಆಗುತ್ತದೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಜನಪ್ರತಿನಿಧಿಗಳು ತಾಲ್ಲೂಕಿನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನಲ್ಲಿ ಕೋವಿಡ್ 19ಗೆ ಸಂಬಂಧಿಸಿ 10 ಕ್ವಾರೆಂಟೈನ್ ಕೇಂದ್ರಗಳನ್ನು ತೆರೆಯಲಾಗಿತ್ತು. ಸದ್ಯ 14 ಜನರು ಮಾತ್ರ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇದ್ದಾರೆ. ತಾಲ್ಲೂಕಿನಲ್ಲಿ 710 ಜನರು ಹೋಂ ಕ್ವಾರೆಂಟೈನ್‌ನಲ್ಲಿದ್ದರು. ಅವರಲ್ಲಿ 339 ಜನರು ಹೊರ ರಾಜ್ಯಗಳಿಂದಬಂದವರು. ಸದ್ಯ 93 ಜನರು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜೇತಾ ಉಕ್ಕಲಿ ಮಾಹಿತಿ ನೀಡಿದರು.

‘ಒಟ್ಟು 462 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ. ಅವರಿಬ್ಬರೂಬೇರೆ ರಾಜ್ಯದಿಂದ ಬಂದವರಾಗಿದ್ದು, ಒಬ್ಬರು ಈಗಾಗಲೇ ಗುಣಮುಖರಾಗಿದ್ದಾರೆ. ಮತ್ತೊಬ್ಬರಿಗೆ ಕಾರವಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ತಾಲ್ಲೂಕಿನ ಡಿಗ್ಗಿ ಹಾಗೂ ಕ್ಯಾಸಲ್ ರಾಕ್ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ವಾರೆಂಟೈನ್ಮಾಡಲಾದ ಶಾಲಾ ಕಾಲೇಜುಗಳನ್ನು ಹಾಗೂ ವಸತಿ ನಿಲಯಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ದೇಶಪಾಂಡೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈವರೆಗೆ ವಾಡಿಕೆಯಂತೆ 30.3 ಸೆಂಟಿಮೀಟರ್ ಮಳೆಯಾಗಬೇಕಿತ್ತು. ಆದರೆ, 44.1 ಸೆಂಟಿಮೀಟರ್ ಮಳೆಯಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬೀಜವನ್ನು ಮಾತ್ರ ವಿತರಿಸಲಾಗುತ್ತಿದೆ. ತಾಡಪತ್ರೆಗಳಿಗೆ ಅಧಿಕ ಬೇಡಿಕೆಯಿದೆ. ಸರ್ಕಾರದಿಂದ ಪೂರೈಕೆಯಾಗಿಲ್ಲ ಎಂದುಕೃಷಿ ಇಲಾಖೆಸಹಾಯಕ ನಿರ್ದೇಶಕ ಪಿ.ಐ.ಮಾನೆಗಮನ ಸೆಳೆದರು.

‘ಕೋವಿಡ್ ಒಂದು ನೆಪ’:‘ಅಧಿಕಾರಿಗಳಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಕೋವಿಡ್– 19 ಒಂದು ನೆಪವಾಗಿದೆ’ ಎಂದು ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.ಚಿಕ್ಕ ನೀರಾವರಿಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಗಳಿಗೆ ಹಾಜರಾಗುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸುವಂತೆ ಶಾಸಕರು ತಹಶೀಲ್ದಾರರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಂಜಯ ಹಣಬರ, ರಮೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಉಪಾಧ್ಯಕ್ಷ ವಿಜಯ ಪಂಡಿತ, ತಹಶೀಲ್ದಾರ್ ಸಂಜಯ ಕಾಂಬಳೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಡಕುಂದ್ರಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.