ADVERTISEMENT

ನಾಡಿನ ಸಂಸ್ಕೃತಿಯಂತಾದ ರೆಸಾರ್ಟ್ ರಾಜಕಾರಣ: ಸಚಿವ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 5:29 IST
Last Updated 1 ನವೆಂಬರ್ 2020, 5:29 IST
ಶಿವರಾಮ್‌ ಹೆಬ್ಬಾರ
ಶಿವರಾಮ್‌ ಹೆಬ್ಬಾರ   

ಕಾರವಾರ: 'ರೆಸಾರ್ಟ್ ರಾಜಕಾರಣ ಈಗ ಬಿ.ಜೆ.ಪಿ ಸಂಸ್ಕೃತಿ, ಕಾಂಗ್ರೆಸ್ ಸಂಸ್ಕೃತಿ ಅಂತಲ್ಲ. ಒಂದರ್ಥದಲ್ಲಿ ನಾಡಿನ ಸಂಸ್ಕೃತಿ ಆಗ್ಬಿಟ್ಟಿದೆ' ಎಂದು ಕಾರ್ಮಿಕ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾರವಾರ ನಗರಸಭೆಯ ಬಿಜೆಪಿ ಮತ್ತು ಪಕ್ಷಕ್ಕೆ ಬೆಂಬಲ ನೀಡಿರುವ ಪಕ್ಷೇತರ ಸದಸ್ಯರು ಗೋವಾದ ರೆಸಾರ್ಟ್ ನಲ್ಲಿ ಶನಿವಾರ ವಾಸ್ತವ್ಯ ಹೂಡಿದ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕಾರವಾರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ.

'ಕಾಂಗ್ರೆಸ್ ನವರ ಹತಾಶೆಯ ಸ್ಥಿತಿಗೆ ಅನುಗುಣವಾಗಿ ಬಿಜೆಪಿ ತನ್ನ ಸದಸ್ಯರನ್ನು ಅನಿವಾರ್ಯವಾಗಿ ರೆಸಾರ್ಟ್ ಗೆ ಕಳುಹಿಸಿದೆ. ಯಾವ ಕಾಲದಲ್ಲಿ ಯಾವ ಪಕ್ಷದಲ್ಲಿ ರೆಸಾರ್ಟ್ ರಾಜಕೀಯ ಆಗಿಲ್ಲ ಹೇಳಿ? ನಾನೇ ಹಿಂದೆ ಕಾಂಗ್ರೆಸ್ ನಲ್ಲಿದ್ದೆ. ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ನಮ್ಮನ್ನೂ ಗೋವಾ, ಹೈದರಾಬಾದ್ ರೆಸಾರ್ಟ್ ಗಳಲ್ಲಿ ಕಾಂಗ್ರೆಸ್ ನವರು ಇಟ್ಟುಕೊಂಡಿರಲಿಲ್ವಾ? ರೆಸಾರ್ಟ್ ರಾಜಕಾರಣ ಮುಂದೆಯೂ ಇರುತ್ತದೆ. ಈ ಸಂಸ್ಕೃತಿ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ಬಾರದಿರಲಿ ಎಂಬುದು ನನ್ನ ಅಪೇಕ್ಷೆ' ಎಂದು ಹೇಳಿದರು.

ADVERTISEMENT

ಬೆಳಗಾವಿಯಲ್ಲಿ ಎಂಇಎಸ್ ಪಕ್ಷದ ತಗಾದೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಎಂಇಎಸ್ ನ ಆಕ್ಷೇಪಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಅದರ ಪ್ರಚೋದನೆಯಿಂದ ಪುಂಡಾಟ ಮಾಡುತ್ತಿದೆ. ಈ ಹಿಂದೆ ವಿಧಾನಸಭೆಯಲ್ಲಿ ಆ ಪಕ್ಷದ ಐವರು ಶಾಸಕರಿದ್ದರು. ಇವತ್ತು ಒಬ್ಬರೂ ಇಲ್ಲ. ಬೆಳಗಾವಿಯಲ್ಲಿ ಒಬ್ಬರೂ ಶಾಸಕರನ್ನು ಹೊಂದಿರದ ಎಂ.ಇ.ಎಸ್, ಬೆಳಗಾವಿಯು ಮಹಾರಾಷ್ಟ್ರದ್ದು ಎಂದು ಹೇಳುವುದರಲ್ಲಿ ಯಾವ ನ್ಯಾಯವೂ ಇಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.