
ಕಾರವಾರ: ಕಾರವಾರ–ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಐದು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯನ್ನು ಭಾನುವಾರ ತೆರೆಯಲಾಯಿತು.
ಇಲ್ಲಿನ ಕಮಲಾಕರ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿ ಆರಂಭಿಸಲಾಗಿದ್ದು ಪಕ್ಷದ ಘೋಷಿತ ಅಭ್ಯರ್ಥಿ ಸತೀಶ್ ಸೈಲ್ ಮತ್ತು ಹಿರಿಯ ಮುಖಂಡ ರವೀಂದ್ರ ಅಮದಳ್ಳಿ ಜಂಟಿಯಾಗಿ ಕಚೇರಿ ಉದ್ಘಾಟಿಸಿದರು.
2018ರ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಪಿಕಳೆ ರಸ್ತೆಯ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿ ತೆರೆಯಲಾಗಿತ್ತು. ಪಕ್ಷದ ಅಭ್ಯರ್ಥಿ ಸತೀಶ್ ಸೈಲ್ ಸೋಲು ಕಂಡ ಬಳಿಕ ಕಚೇರಿ ಮುಚ್ಚಲಾಗಿತ್ತು. ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಪುನಃ ಕಚೇರಿ ತೆರೆಯಲಾಗಿದೆ. ಕಾಂಗ್ರೆಸ್ ಭದ್ರನೆಲೆಯಾಗಿದ್ದ ಕಾರವಾರ–ಅಂಕೋಲಾ ಕ್ಷೇತ್ರದಲ್ಲಿ ಪಕ್ಷದ ಕಚೇರಿ ತೆರೆಯದಿರುವ ಬಗ್ಗೆ ಕೆಲವು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಭಾಕರ ಮಾಳ್ಸೇಕರ್ ಸೇರಿ ಹಲವು ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
‘ಪಕ್ಷಕ್ಕೆ ಅಧಿಕೃತ ಕಚೇರಿ ಇರದಿದ್ದರೂ ಗೌರೀಶ ಕಾಯ್ಕಿಣಿ ರಸ್ತೆಯಲ್ಲಿರುವ ಕಟ್ಟಡದಲ್ಲಿದ್ದ ನನ್ನ ಕಚೇರಿಯಲ್ಲಿಯೇ ಪಕ್ಷದ ಚಟುವಟಿಕೆ ಕುರಿತು ಚರ್ಚಿಸಲಾಗುತ್ತಿತ್ತು. ಈಗ ಕಾರ್ಯಕರ್ತರ ಅನುಕೂಲಕ್ಕೆ ಪ್ರತ್ಯೇಕ ಕಚೇರಿಯನ್ನು ಆರಂಭಿಸಿದ್ದೇವೆ’ ಎಂದು ಕಾಂಗ್ರೆಸ್ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ಸಮೀರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.