ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ: ಕೂರ್ವೆ ದ್ವೀಪ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 4:11 IST
Last Updated 23 ಜುಲೈ 2021, 4:11 IST
ಸಿದ್ದಾಪುರದ ಕಾನಸೂರಿನ ಶೇಡಿ ದಂಟಕಲ್‌ನಲ್ಲಿ ತೋಟ ಜಲಾವೃತ
ಸಿದ್ದಾಪುರದ ಕಾನಸೂರಿನ ಶೇಡಿ ದಂಟಕಲ್‌ನಲ್ಲಿ ತೋಟ ಜಲಾವೃತ   

ಕಾರವಾರ: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ತಾಲ್ಲೂಕುಗಳ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಅಂಕೋಲಾ ತಾಲ್ಲೂಕಿನ ಕೂರ್ವೆ ದ್ವೀಪವು ಗಂಗಾವಳಿ ನದಿ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದೆ.

ದ್ವೀಪದಲ್ಲಿ ಜನ ವಾಸವಿದ್ದು, ರಕ್ಷಣೆಗೆ ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಗಾಳಿ ಮತ್ತು ನೀರಿನ ರಭಸಕ್ಕೆ ದೋಣಿ ಮೇಲೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಸುಂಕಸಾಳ, ಡೊಂಗ್ರಿ, ವಾಸರ ಕುದ್ರಿಗೆ, ಮೊಗಟಾ ಬೆಳಸೆ, ಶೆಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳು ಜಲಾವೃತವಾಗಿವೆ. ಸುಂಕಸಾಳದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ಇದರಿಂದ ಯಲ್ಲಾಪುರದ ಮೂಲಕ ಕರಾವಳಿಗೆ ಸಂಪರ್ಕ ಕಡಿತಗೊಂಡಿದೆ. ಹಾಲು, ತರಕಾರಿ ಪತ್ರಿಕೆಗಳು ಈ ಹೆದ್ದಾರಿಯಲ್ಲೇ ಕರಾವಳಿಗೆ ರವಾನೆಯಾಗುತ್ತವೆ. ಸುಂಕಸಾಳದಲ್ಲಿ ಪೆಟ್ರೋಲ್ ಪಂಪ್ ಮುಳುಗಡೆಯಾಗಿದೆ.

ADVERTISEMENT

ಕುಮಟಾ ತಾಲ್ಲೂಕಿನಲ್ಲಿ ಅಘನಾಶಿನಿ ನದಿಯು ಉಕ್ಕಿ ಹರಿಯುತ್ತಿದೆ. ಸಮೀಪದ ಕೆಲವು ಮನೆಗಳಿಗೆ, ತೋಟ, ಗದ್ದೆಗಳು ಜಲಾವೃತವಾಗಿವೆ.

ಸಿದ್ದಾಪುರ ತಾಲ್ಲೂಕಿನಲ್ಲಿ ರಭಸದ ಮಳೆ ಮುಂದುವರಿದಿದೆ. ರಾತ್ರಿ ಸ್ವಲ್ಪ ಕಡಿಮೆಯಾಗಿದ್ದ ವರ್ಷಧಾರೆ, ಬೆಳಿಗ್ಗೆ ಪುನಃ ಜೋರಾಗಿದೆ.
ಶುಕ್ರವಾರ ಬೆಳಿಗ್ಗೆ 8ಕ್ಕೆ ಮುಕ್ತಾಯಗೊಂಡ 24 ತಾಸುಗಳ ಅವಧಿಯಲ್ಲಿ 23.5 ಸೆಂಟಿಮೀಟರ್‌ಗಳಷ್ಟು ಭಾರಿ ಮಳೆ ದಾಖಲಾಗಿದೆ. ಸ್ಥಳೀಯ ಹೊಳೆಗಳು ಉಕ್ಕಿ ಹರಿಯುತ್ತಿರುವ ಕಾರಣದಿಂದ ತಾಲ್ಲೂಕಿನ ಹೆಮ್ಮನಬೈಲ್ ಮತ್ತು ಕಲ್ಯಾಣ ಪುರದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ದಾಂಡೇಲಿಯಲ್ಲೂ ಮಳೆ ಮುಂದುವರಿದಿದ್ದು, ವಿವಿಧ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಡಿಪೊದಲ್ಲೇ ನಿಂತಿವೆ.

ಜೊಯಿಡಾದ ಕ್ಯಾಸಲ್‌ರಾಕ್‌ನಲ್ಲಿ ಮನೆಗಳಿಗೆ ನೀರು ನುಗ್ಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.