ADVERTISEMENT

‘ಅನಂತಕುಮಾರ ಹೆಗಡೆ ಹೊಸಬರಿಗೆ ಅವಕಾಶ ನೀಡಲಿ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:23 IST
Last Updated 4 ಜನವರಿ 2019, 16:23 IST
ಬಸವರಾಜ ಓಶಿಮಠ
ಬಸವರಾಜ ಓಶಿಮಠ   

ಕಾರವಾರ: ‘ಎರಡೂವರೆ ದಶಕಗಳಿಂದ ಅನಂತಕುಮಾರ ಹೆಗಡೆ ಅವರು ಜಿಲ್ಲೆಯಲ್ಲಿ ಸಂಸದರಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಆರ್ಥಿಕ ಪ್ರಕೋಷ್ಠದ ಸಂಚಾಲಕ ಬಸವರಾಜ ಓಶಿಮಠ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕಳೆದ ಲೋಕಸಭಾ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ಅವರು ಅಂದು ಹೇಳಿದ್ದರು. ಅದಾದ ನಂತರ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಆಗಲೂ ಇದೇ ಮಾತನ್ನು ಪುನರುಚ್ಛರಿಸಿದ್ದರು. ಹೀಗಾಗಿ, ಆ ಸಂದರ್ಭದಲ್ಲಿ ನಾನು ಲೋಕಸಭೆಗೆ ಸ್ಪರ್ಧಿಸುವ ಇಚ್ಛೆಯನ್ನು ಅವರ ಬಳಿ ವ್ಯಕ್ತಪಡಿಸಿದ್ದೆ. ಅವರ ಬೆಂಬಲ ಸಿಕ್ಕರೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.

‘ರಾಜಕೀಯದಲ್ಲಿ ಹೊಸಬರಿಗೆ ಅವಕಾಶ ನೀಡುವುದಕ್ಕಾಗಿ ಸುಷ್ಮಾ ಸ್ವರಾಜ್ ಹಾಗೂ ಉಮಾಭಾರತಿ ನಿವೃತ್ತಿ ಘೋಷಿಸುತ್ತಿದ್ದಾರೆ. ಅವರಂತೆ ಅನಂತಕುಮಾರ ಹೆಗಡೆ ಕೂಡ ನನಗೆ ಅವಕಾಶ ಮಾಡಿಕೊಟ್ಟು, ದೊಡ್ಡ ವ್ಯಕ್ತಿ ಎನಿಸಿಕೊಳ್ಳಬೇಕು. ಪಕ್ಷಕ್ಕೆ ಅವರ ಅವಶ್ಯಕತೆ ಇದ್ದು, ದೇಶದ ಇತರೆಡೆ ಪಕ್ಷ ಕಟ್ಟುವ ಕಾರ್ಯದಲ್ಲಿ ಹೆಗಡೆ ತೊಡಗಿಕೊಳ್ಳಬೇಕು’ ಎಂದರು.

ADVERTISEMENT

‘ಅನಂತಕುಮಾರ ಹೆಗಡೆ ಅವರ ವಿರುದ್ಧವಾಗಿ ನಾನು ಮಾತನಾಡುತ್ತಿಲ್ಲ. ಆದರೆ, ಪಕ್ಷದ ಹಿತದೃಷ್ಟಿಯಿಂದ ಬೇರೆಯವರನ್ನು ಲೋಕಸಭೆ ಅಭ್ಯರ್ಥಿಯನ್ನಾಗಿಸಬೇಕು. ನನ್ನನ್ನು ಬಿಟ್ಟು ಮತ್ಯಾರೇ ಹೊಸಬರಿಗೆ ಅವಕಾಶ ನೀಡಿದರೂ ನಾನು ಅವರಿಗೆ ಬೆಂಬಲಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.