
ಕಾರವಾರ: ಮರಳು ಗಣಿಗಾರಿಕೆ ಉದ್ಯಮದಿಂದ ಜೀವನ ನಡೆಸುತ್ತಿದ್ದ ಕಾಳಿ ನದಿ ತಟದ ಗ್ರಾಮದ ನೂರಾರು ಜನರು ಈಗ ಅನ್ಯ ಉದ್ಯೋಗದತ್ತ ವಲಸೆ ಹೋಗಿರುವುದು ಒಂದೆಡೆಯಾದರೆ, ಗಣಿಗಾರಿಕೆಗೆ ಬಳಕೆಯಾಗುತ್ತಿದ್ದ ಪರಿಕರಗಳು ಇಟ್ಟ ಜಾಗದಲ್ಲೇ ಬಳಕೆಯಾಗದೆ ಹಾಳಾಗುತ್ತಿವೆ.
ಒಂದು ಕಾಲದಲ್ಲಿ ಇಲ್ಲಿನ ಕೋಡಿಬಾಗದಲ್ಲಿರುವ ಕಾಳಿ ನದಿಯ ದಂಡೆ ಮರಳು ಗಣಿಗಾರಿಕೆ ಉದ್ಯಮದಿಂದ ಗಿಜಿಗುಡುತ್ತಿತ್ತು. ಸುತ್ತಮುತ್ತಲಿನ ನೂರಾರು ಕುಟುಂಬಗಳಿಗೆ ಇದೇ ಉದ್ಯಮ ಜೀವನಕ್ಕೆ ಆಧಾರವಾಗಿತ್ತು. ತಾಲ್ಲೂಕಿನ ಸಿದ್ಧರ, ಕಿನ್ನರ, ವೈಲವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ಜನರ ಆದಾಯ ಮೂಲವಾಗಿದ್ದವು.
‘ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ಸ್ಥಗಿತಗೊಂಡು ಐದಾರು ವರ್ಷ ಕಳೆದಿದೆ. ಮರಳು ತೆಗೆಯಲು, ದಡದತ್ತ ಸಾಗಿಸಲು ಬಳಕೆಯಾಗುತ್ತಿದ್ದ ಲಕ್ಷಾಂತರ ಮೌಲ್ಯದ ಮರದ ದೋಣಿಗಳು ಬಳಕೆಯಾಗದೆ ಹಾಳಾಗಿವೆ. ಹಲವು ದೋಣಿಗಳ ಹಲಗೆಗಳನ್ನು ತೆರವುಗೊಳಿಸಿ, ಮಾಲೀಕರು ದೋಣಿ ಒಡೆದಿದ್ದಾರೆ. ಅಂತಹ ದೋಣಿ ಬಳಸಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನಗಳು ಮರೆತು ಹೋಗುತ್ತಿವೆ’ ಎನ್ನುತ್ತಾರೆ ನಂದನಗದ್ದಾದ ನಿತಿನ್ ಸಾರಂಗ.
‘ಮರಳು ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಕೈತುಂಬ ಆದಾಯ, ದಿನವಿಡಿ ಕೆಲಸ ಸಿಗುತ್ತಿತ್ತು. ಈಗ ಕಡಿಮೆ ದರದಲ್ಲಿ ಕೂಲಿ ಕೆಲಸ ಮಾಡಲು ಹೋಗಬೇಕಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮರಳು ಗಣಿಗಾರಿಕೆ ನಿಷೇಧವಿದ್ದರೂ ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ನಿಂತಿಲ್ಲ. ನಂದನಗದ್ದಾ, ಸುಂಕೇರಿ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ನೂರಾರು ಜನರು ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ. ಅಧಿಕೃತ ಗಣಿಗಾರಿಕೆ ಪರವಾನಗಿದಾರರಾಗಿದ್ದವರಲ್ಲಿ ಕೆಲವರು ಶಾಮೀಲಾಗಿದ್ದಾರೆ. ಆದರೆ, ಹೊರರಾಜ್ಯದ ಕಾರ್ಮಿಕರನ್ನು ಕರೆಯಿಸಿಕೊಳ್ಳಲಾಗುತ್ತಿದೆ’ ಎಂದು ಸ್ಥಳೀಯ ಕಾರ್ಮಿಕರೊಬ್ಬರು ದೂರಿದರು.
2022ರ ಮೇ 19 ರಂದು ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಡೆಸಲು ನಿಷೇಧ ಹೇರಲಾಗಿತ್ತು. ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಹೊನ್ನಾವರದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಹಸಿರು ಪೀಠಕ್ಕೆ (ಎನ್ಜಿಟಿ) ದೂರು ಸಲ್ಲಿಸಿದ್ದರಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಇದಕ್ಕೂ ಮೂರು ವರ್ಷ ಮುಂಚಿನಿಂದಲೇ ಕಾಳಿ ನದಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ ಎನ್ಜಿಟಿ ಆದೇಶಿಸಿತ್ತು.
ಮರಳು ಗಣಿಗಾರಿಕೆಗೆ ಅನುಮತಿ ಪಡೆಯಲು ಕಾನೂನು ಹೋರಾಟ ನಡೆದಿದೆ. ಇದೇ ಉದ್ಯಮ ನಂಬಿಕೊಂಡಿದ್ದ ಹಲವು ಕಾರ್ಮಿಕರು ಅತಂತ್ರರಾಗಿದ್ದಾರೆಅರವಿಂದ ಕಲ್ಗುಟ್ಕರ್ ಮರಳು ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ಉಳಗಾ ಹಳಗಾ ಕೆರವಡಿ ಕಿನ್ನರ ಸಿದ್ಧರ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಕಾಳಿ ನದಿಯಿಂದ ಮರಳು ತೆಗೆಯಲಾಗುತ್ತಿದೆ. ಅವುಗಳನ್ನು ಸ್ಥಳೀಯವಾಗಿ ನೆರೆಯ ಗೋವಾ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗೆ ಹಲವು ಬಾರಿ ದೂರು ನೀಡಿದ್ದಾರೆ. ‘ಅಕ್ರಮ ಮರಳು ಗಣಿಗಾರಿಕೆ ನಡೆಯುವಲ್ಲಿ ರಾಜಕೀಯ ಪ್ರಭಾವಿಗಳ ಶಾಮೀಲಾತಿ ಇದೆ. ಈ ಹಿಂದೆ ಹಲವು ಬಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರೂ ರಾಜಕೀಯ ಒತ್ತಡದಿಂದ ಅಕ್ರಮ ಚಟುವಟಿಕೆ ಮುಂದುವರಿದಿದೆ’ ಎಂದು ಮರಳು ಗುತ್ತಿಗೆದಾರರೊಬ್ಬರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.