ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ (ಕೆಡಿಸಿಸಿ) ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎರಡೂ ಹುದ್ದೆಗೆ ಅವರಿಬ್ಬರ ಹೊರತಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅಧಿಕೃತ ಘೋಷಣೆ ಮಾಡಲಾಯಿತು.
ಈವರೆಗೆ ಕೆಡಿಸಿಸಿ ಬ್ಯಾಂಕಿಗೆ ಕಾಂಗ್ರೆಸ್ ಬೆಂಬಲಿತರೆ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಿದ್ದರು. ಮೊದಲ ಬಾರಿಗೆ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಏರುವಂತಾಯಿತು. 16 ನಿರ್ದೇಶಕ ಸ್ಥಾನದ ಪೈಕಿ 11 ಮಂದಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬಣದವರು ಇದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಿವರಾಮ ಹೆಬ್ಬಾರ್, 'ಪಕ್ಷದ ಆಧಾರದಲ್ಲಿ ಚುನಾವಣೆ ನಡೆದಿರಲಿಲ್ಲ. ಎಲ್ಲ ನಿರ್ದೇಶಕರ ಸಹಮತದೊಂದಿಗೆ ಆಯ್ಕೆಯಾದೆ' ಎಂದರು.
'ನಾವೆಲ್ಲರೂ ಒಗ್ಗಟ್ಟಾಗಿ ನಿಂತಿದ್ದೇವೆ. ಇದೇ ರೀತಿ ಮುಂದುವರೆಯುತ್ತೇವೆ' ಎಂದರು.
'ಪಕ್ಷಾತೀತ ನಿಲುವಿನೊಂದಿಗೆ ಆಡಳಿತ ನಡಸಲಾಗುತ್ತದೆ. ಈ ಆಯ್ಕೆ ಜಿಲ್ಲೆಯ ರಾಜಕಾರಣಕ್ಕೆ ಮಾದರಿ. ಶತಮಾನದ ಇತಿಹಾಸದಲ್ಲಿ ಇದು ಒಳ್ಳೆಯ ಬೆಳವಣಿಗೆ. ನಿರುದ್ಯೋಗಿಗಳು, ಠೇವಣಿದಾರರು, ಕೃಷಿಕರ ಶ್ರೇಯೋಭಿವೃದ್ಧಿ ದೃಷ್ಟಿಯಲ್ಲಿಟ್ಟು ಉತ್ತಮ ಆಡಳಿತ ನೀಡುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
'ಬ್ಯಾಂಕು 21ನೇ ಶತಮಾನಕ್ಕೆ ತಕ್ಕಂತೆ ಆಡಳಿತ ನಡೆಸಬೇಕಿದೆ. 20ನೇ ಶತಮಾನ ಮುಗಿದಿದೆ ಎಂಬುದನ್ನು ಅಧಿಕಾರಿಗಳು ಗಮನದಲ್ಲಿಡಬೇಕು' ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.