ADVERTISEMENT

ಕಾರವಾರ: ಪದಾಧಿಕಾರಿಗಳ ಆಯ್ಕೆ ಫೆ.15, 16ರಂದು- ಎಂ.ಗುರುಮೂರ್ತಿ

ದಾವಣಗೆರೆಯಲ್ಲಿ ದ.ಸಂ.ಸ ಸರ್ವ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 13:28 IST
Last Updated 7 ಜನವರಿ 2022, 13:28 IST
ಎಂ.ಗುರುಮೂರ್ತಿ
ಎಂ.ಗುರುಮೂರ್ತಿ   

ಕಾರವಾರ: ‘ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸರ್ವ ಸದಸ್ಯರ ಸಭೆಯು ಫೆ.15 ಮತ್ತು 16ರಂದು ದಾವಣಗೆರೆಯಲ್ಲಿ ನಡೆಯಲಿದೆ. ಅಂದು ಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ.ಕೃಷ್ಣಪ್ಪ ಅವರ ನಿಧನದ ನಂತರ ಸಮಿತಿಯು ವಿಘಟನೆಯತ್ತ ಮುಖ ಮಾಡಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೊರ ಬಂದಿದ್ದ ಕೆಲವರು, ಸಮಿತಿಯ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದರು. 1974ರಿಂದ 2009ರವರೆಗೂ ದಾಖಲೆಗಳಿದ್ದು, ಕಾಲಕಾಲಕ್ಕೆ ಸಮಿತಿಯನ್ನು ನವೀಕರಣ ಮಾಡಲಾಗುತ್ತಿತ್ತು. ಆದರೂ ಹಲವರು ಸಮಿತಿಯ ಹೆಸರಿನಲ್ಲೇ ಚಟುವಟಿಕೆ ನಡೆಸುತ್ತಿದ್ದರು. ಇದರ ವಿರುದ್ಧ ಭದ್ರಾವತಿ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು’ ಎಂದರು.

‘ವೆಂಕಟಗಿರಿಯಯ್ಯ ಮತ್ತು ಇತರರ ವಿರುದ್ಧ 2012ರಲ್ಲಿ ದಾಖಲಾದ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಒಂಬತ್ತು ವರ್ಷ ಎರಡು ತಿಂಗಳು 18 ದಿನ ಮುಂದುವರಿಯಿತು. ಕಳೆದ ವರ್ಷ ಮಾರ್ಚ್ 24ರಂದು ನ್ಯಾಯಾಲಯವು ಎಂ.ಗುರುಮೂರ್ತಿ ಮತ್ತು ಗಿರಿಯಪ್ಪ ಅವರ ಪರವಾಗಿ ತೀರ್ಪು ನೀಡಿದೆ’ ಎಂದು ತಿಳಿಸಿದರು.

ADVERTISEMENT

‘ಮೂಲ ಸಮಿತಿಗೆ ಎಂ.ಗುರುಮೂರ್ತಿ ಮತ್ತು ಗಿರಿಯಪ್ಪ ಅವರು ವಾರಸುದಾರರು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಹಾಗಾಗಿ ಸಮಿತಿಯಿಂದ ಹೊರ ಹೋಗಿದ್ದ ಎಲ್ಲ ಮುಖಂಡರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಿದ್ದೇವೆ’ ಎಂದು ತಿಳಿಸಿದರು.

ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಮಾತನಾಡಿ, ‘ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮಿತಿಯನ್ನು ಬಲ ಪಡಿಸಲಾಗುವುದು. ಸರ್ಕಾರಗಳ ಜನವಿರೋಧಿ ನೀತಿ, ಕಾಯ್ದೆಗಳ ವಿರುದ್ಧ ಹೋರಾಟ ಸಂಘಟಿಸಲಾಗುವುದು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಫಕೀರಪ್ಪ, ಬಸವರಾಜ ಸಂಗಮೇಶ್ವರ, ಶಾಂತರಾಮ ಹುಲಸ್ವಾರ, ಎಸ್.ಡಿ.ಮುಡೆಣ್ಣವರ, ಶಿವಪ್ಪ ಪಾಲಕನಮರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.