ADVERTISEMENT

‘ಆಡಿದ ಮಾತಿಗೆ ಬದ್ಧರಿದ್ದರು...’

ಹಳೆಯ ನೆನಪು ಬಿಚ್ಚಿಟ್ಟ ಹಿರಿಯ ಕಾಂಗ್ರೆಸ್ಸಿಗ ಜಯಶೀಲ ಗೌಡ

ಸಂಧ್ಯಾ ಹೆಗಡೆ
Published 17 ಮಾರ್ಚ್ 2019, 12:59 IST
Last Updated 17 ಮಾರ್ಚ್ 2019, 12:59 IST
ಜಯಶೀಲ ಗೌಡ
ಜಯಶೀಲ ಗೌಡ   

ಶಿರಸಿ: ‘ನಾಲ್ಕು ದಶಕಗಳಲ್ಲಿ ರಾಜಕಾರಣವೂ ಬದಲಾಗಿದೆ, ರಾಜಕಾರಣಿಗಳೂ ಬದಲಾಗಿದ್ದಾರೆ. ಆಗ ಈಗಿನಂತೆ ಎಲೆಕ್ಟ್ರಾನಿಕ್ ಮಾಧ್ಯಮ ಇರಲಿಲ್ಲ. ಟಿ.ವಿ.ಯಲ್ಲಿ ಪದೇ ಪದೇ ತೋರಿಸುತ್ತಿದ್ದರೂ, ಅರ್ಧಗಂಟೆಗೊಮ್ಮೆ ರಾಜಕಾರಣಿಗಳು ಹೇಳಿಕೆ ಬದಲಾಯಿಸುತ್ತಾರೆ. ಹಾಗೆ ಹೇಳಿಯೇ ಇಲ್ಲವೆಂದು ನುಣುಚಿಕೊಳ್ಳುತ್ತಾರೆ. ಹಿಂದಿನ ರಾಜಕಾರಣಿಗಳು ಆಡಿದ ಮಾತಿಗೆ ಬದ್ಧರಿದ್ದರು..’

ಹೀಗೆ ಮಾತಿಗೆ ಶುರುವಿಟ್ಟರು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತ ಬನವಾಸಿ ಸಮೀಪ ಭಾಶಿಯ ಜಯಶೀಲ ಗೌಡ ಅವರು. ‘1970ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಅಧಿಕಾರದಲ್ಲಿದ್ದಾಗ ಜನತಾ ಪಕ್ಷದಲ್ಲಿದ್ದೆ. ಆಗ ರಾಜ್ಯದಲ್ಲಿ ಹೆಗಡೆ ಅಧಿಕಾರದಲ್ಲಿದ್ದರೂ, ಜಿಲ್ಲೆಯಲ್ಲಿ ಕಾಂಗ್ರೆಸ್ ಆಧಿಪತ್ಯ ಇತ್ತು. ಹೆಗಡೆ ನಂತರ ಕಾಂಗ್ರೆಸ್ ಸೇರ್ಪಡೆಗೊಂಡು, ಕಾರ್ಯಕರ್ತರಾಗಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದೆವು. ಆಗೆಲ್ಲ ಕಾರ್ಯಕರ್ತರೆಂದು ಆಯಾ ಪಕ್ಷಕ್ಕೆ ನಿಷ್ಠರಾಗಿರುತ್ತಿದ್ದರು. ಚುನಾವಣೆ ಬಂತೆಂದರೆ ಇಡೀ ಊರು ಪಕ್ಷಾಧಾರಿತವಾಗಿ ಭಾಗವಾಗುತ್ತಿತ್ತು. ಈಗಿನ ಕಾರ್ಯಕರ್ತರಿಗೆ ಆ ಬದ್ಧತೆ ಇಲ್ಲ, ಮತದಾರರಿಗೆ ಕೂಡ’ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

‘ಕೆಲವು ಊರುಗಳಲ್ಲಿ ನಿರ್ದಿಷ್ಟ ಸಮುದಾಯದವರು ಮಾತ್ರ ಇದ್ದರೆ, ಅವರು ಯಾವುದೋ ಪಕ್ಷ, ವ್ಯಕ್ತಿಗೆ ಅಂಟಿಕೊಂಡಿರುತ್ತಿದ್ದರು. ಬೇರೆ ಪಕ್ಷದವರಿಗೆ ಆ ಊರಿಗೆ ಬಂದು ಭಾಷಣ ಮಾಡಲೂ ಬಿಡುತ್ತಿರಲಿಲ್ಲ. ಈಗಿನ ಮತದಾರರಿಗೆ ಆ ಮುಕ್ತತೆ ಉಳಿದಿಲ್ಲ. ಅವರು ಇಂತಹುದೇ ಪಕ್ಷ ಬೆಂಬಲಿಸುವುದಾಗಿ ಹೇಳಲು ಹಿಂದೇಟು ಹಾಕುತ್ತಾರೆ. ಸೇರಿನ ರಾಜಕಾರಣ ಹೆಚ್ಚಾಗಿದೆ. ಊರಿನ ಅಭಿವೃದ್ಧಿ ಮತದಾರನಿಗೆ ಅಗತ್ಯ. ಪಕ್ಷಾಧಾರಿತವಾಗಿ ಗುರುತಿಸಿಕೊಂಡರೆ, ಊರು ಅಭಿವೃದ್ಧಿಯಾಗದು. ಹೀಗಾಗಿ, ಎಲ್ಲರೊಡನೆ ಗುರುತಿಸಿಕೊಳ್ಳುತ್ತಾರೆ’ ಎಂದು ಇಂದಿನ ಮತದಾರರ ಇಕ್ಕಟ್ಟಿನ ಸ್ಥಿತಿಯನ್ನು ತೆರೆದಿಟ್ಟರು.

ADVERTISEMENT

‘ಹಿಂದೆ ಮತದಾರರಿಗೆ ಆಮಿಷವೊಡ್ಡುವ ಸಂದರ್ಭ ಇರಲಿಲ್ಲ. ಇಂದು ಆಮಿಷಕ್ಕೆ ಮತದಾರರು ಅಂಟಿಕೊಂಡಿದ್ದಾರೆ. ರಾಜಕಾರಣಿಯಾದ ಮೇಲೆ ಕೊಳ್ಳೆ ಹೊಡೆಯುತ್ತಾರೆ, ನಾವು ಯಾಕೆ ಬಿಡಬೇಕು ಎಂಬ ಧೋರಣೆ ಕೆಲವು ಮತದಾರರದ್ದು. ಅದಕ್ಕಾಗಿ ಎಲ್ಲ ಪಕ್ಷಗಳಿಂದ ‘ನೆರವು’ ಪಡೆಯುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.