ಕುಮಟಾ: ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಇರುವ ಮುಖ್ಯ ಬಸ್ ನಿಲ್ದಾಣ ಆವರಣಕ್ಕೆ ₹1.69 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ನೆಲಹಾಸು ನಿರ್ಮಾಣ ಹಾಗೂ ಇತರೆ ಕಾಮಗಾರಿಯನ್ನು ಆರಂಭಿಸಲಾಗಿದೆ.
ಮಾಹಿತಿ ನೀಡಿದ ಕುಮಟಾ ಡಿಪೋ ಮ್ಯಾನೇಜರ್ ವಿನಾಯಕ ದೇಶಭಂಡಾರಿ, ‘ಕಾಂಕ್ರೀಟ್ ಬದಲು ಡಾಂಬರು ಅಳವಡಿಸಿದ್ದ ಬಸ್ ನಿಲ್ದಾಣ ಆವರಣ ಕಿತ್ತು ಹೋಗಿ ಬಸ್ಗಳ ಓಡಾಡಕ್ಕೆ ಹಾಗೂ ಜನರಿಗೆ ತೀರಾ ತೊಂದರೆಯುಂಟಾಗಿತ್ತು. ಹಲವು ವರ್ಷಗಳಿಂದ ಈ ದುರಸ್ತಿ ಕಾರ್ಯ ಆಗಿರಲಿಲ್ಲ. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಇಲಾಖೆಗೆ ದುರಸ್ತಿ ಕಾರ್ಯದ ಬಗ್ಗೆ ಪ್ರಸ್ತಾವ ಕಳಿಸಿದ್ದು, ಈಗ ಅನುದಾನ ಮಂಜೂರಾಗಿ ಕಾಮಗಾರಿ ಆರಂಭಿಸಲಾಗಿದೆ’ ಎಂದರು.
ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಕೆ.ಎಸ್.ಆರ್.ಟಿ.ಸಿ ಕಾಮಗಾರಿ ವಿಭಾಗದ ಎಇಇ ವಿನೋದ ನಾಯಕ, ‘2013ರಲ್ಲಿ ಬಸ್ ನಿಲ್ದಾಣ ನಿರ್ಮಾಣ ಆದನಂತರ ಅದರ ನಿರ್ವಹಣಾ ಕಾರ್ಯ ನಡೆದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ಬಸ್ ನಿಲ್ದಾಣ ಪ್ರವೇಶಿಸುವಲ್ಲಿಂದ ಎಲ್ಲೆಲ್ಲಿ ಡಾಂಬರು ನೆಲ ನಿರ್ಮಿಸಲಾಗಿತ್ತೋ ಅಲ್ಲೆಲ್ಲ ಸುಮಾರು 3,500 ಚದರ ಮೀಟರ್ ವ್ಯಾಪ್ತಿಗೆ ಕಾಂಕ್ರೀಟ್ ನೆಲ ಹಾಸು ನಿರ್ಮಿಸಲಾಗುವುದು. ಬಸ್ ನಿಲ್ದಾಣ ಶೌಚಾಲಯ ದುರಸ್ತಿ, ಮಳೆ ನೀರು ಸೋರಿಕೆ ಉಂಟಾಗುವ ಬಸ್ ನಿಲ್ದಾಣ ಕಟ್ಟಡ ಚಾವಣಿ ದುರಸ್ತಿ, ಇಡೀ ಬಸ್ ನಿಲ್ದಾಣ ಪೇಂಟಿಂಗ್ ಕಾಮಗಾರಿ ಒಳಗೊಂಡಿದೆ. ಖಾಸಗಿ ಗುತ್ತಿಗೆದಾರರಿಗೆ ಕಾಮಗಾರಿ ಟೆಂಡರ್ ಆಗಿದ್ದು, ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.