ADVERTISEMENT

‘ದುಪ್ಪಟ್ಟು ಟೋಲ್ ವಸೂಲಿ ನಿಲ್ಲಿಸದಿದ್ದರೆ ಸರ್ಕಾರದ ವಿರುದ್ಧ ಧರಣಿ’

ಕಾಮಗಾರಿ ಪೂರ್ಣಗೊಳ್ಳದಿದ್ದರೂ ಶುಲ್ಕ ವಸೂಲಿಗೆ ಶಾಸಕ ದಿನಕರ ಶೆಟ್ಟಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 16:34 IST
Last Updated 25 ಫೆಬ್ರುವರಿ 2021, 16:34 IST
ಕುಮಟಾದಲ್ಲಿ ಗುರುವಾರ ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿದರು.
ಕುಮಟಾದಲ್ಲಿ ಗುರುವಾರ ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿದರು.   

ಕುಮಟಾ: ‘ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಹೆದ್ದಾರಿ ಟೋಲ್ ಗೇಟ್‌ನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುವುದು ಸರ್ಕಾರದ ತಪ್ಪು ನಿರ್ಧಾರವಾಗಿದೆ. ಇದನ್ನು ಹಿಂತೆಗೆದುಕೊಳ್ಳದಿದ್ದರೆ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಧರಣಿ ಕುಳಿತುಕೊಳ್ಳುತ್ತೇನೆ’ ಎಂದು ಬಿ.ಜೆ.ಪಿ ಶಾಸಕ ದಿನಕರ ಶೆಟ್ಟಿ, ಗುರುವಾರ ನಡೆದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಿದರು.

‘ದುಪ್ಪಟ್ಟು ಶುಲ್ಕ ವಸೂಲಿ ಅಮಾನವೀಯ ಹಾಗೂ ಅವೈಜ್ಞಾನಿಕ ಕ್ರಮವಾಗಿದೆ. ಹೆದ್ದಾರಿ ನಿರ್ಮಿಸುವ ಐ.ಆರ್.ಬಿ ಕಂಪನಿಯವರು ತಮ್ಮ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ. ಆದರೆ ದುಪ್ಪಟ್ಟು ಶುಲ್ಕ ವಸೂಲಾತಿಯಲ್ಲಿ ಅತಿ ಆಸಕ್ತಿ ತೋರುತ್ತಿದ್ದಾರೆ’ ಎಂದು ದೂರಿದರು.

‘ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿ ವಿಸ್ತರಣೆಗಾಗಿ ಕಡಿದ ಮರಗಳನ್ನು ಸೂಕ್ತ ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡದೇ, ಬೇಕಾದವರಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಐ.ಆರ್.ಬಿ ಕಂಪನಿಯ ಸಿಬ್ಬಂದಿ ಮೇಲಿದೆ. ಇದರ ಬಗ್ಗೆ ವಿವರವಾದ ಸ್ಪಷ್ಟನೆಯನ್ನು ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಫಾಸ್ಟ್ ಟ್ಯಾಗ್ ಜಾರಿಗೆ ಬರುವ ಮುನ್ನವೇ ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಕೆ.ಎ-47 ನೋಂದಣಿ ಸಂಖ್ಯೆ ಎಲ್ಲ ವಾಹನಗಳಿಗೆ ಹೆದ್ದಾರಿ ಟೋಲ್‌ನಲ್ಲಿ ಶುಲ್ಕ ಇಲ್ಲದೆ ಸಂಚರಿಸಲು ಬಿಡಬೇಕು ಎಂದು ಉಪವಿಭಾಗಾಧಿಕಾರಿ, ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ನಿರ್ಮಾಣ ಕಂಪನಿ ಅಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿತ್ತು. ಇನ್ನು ಮುಂದೆ ಅಂಥ ವಾಹನಗಳಿಗೆ ಶುಲ್ಕವಿಲ್ಲದೆ ಸಂಚರಿಸಲು ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಎಚ್ಚರಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಅಜಿತ್, ಡಾ. ಜಿ.ಜಿ. ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.