ADVERTISEMENT

ಕುಮಟಾ-ಶಿರಸಿ ಹೆದ್ದಾರಿ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 9:20 IST
Last Updated 31 ಡಿಸೆಂಬರ್ 2025, 9:20 IST
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಂತರ ಕುಮಟಾ ತಾಲ್ಲೂಕಿನ ಕತಗಾಲದಲ್ಲಿ ಶಾಸಕ ದಿನಕರ ಶೆಟ್ಟಿ ಕುಮಟಾ-ಶಿರಸಿ ನಡುವೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಂತರ ಕುಮಟಾ ತಾಲ್ಲೂಕಿನ ಕತಗಾಲದಲ್ಲಿ ಶಾಸಕ ದಿನಕರ ಶೆಟ್ಟಿ ಕುಮಟಾ-ಶಿರಸಿ ನಡುವೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು   

ಕುಮಟಾ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದ ನಂತರ ಕುಮಟಾ-ಶಿರಸಿ ನಡುವೆ ಬಸ್ ಹಾಗೂ ಲಘು ವಾಹನ ಸಂಚಾರಕ್ಕೆ ಶಾಸಕ ದಿನಕರ ಶೆಟ್ಟಿ ಅವರು ಮಂಗಳವಾರ ಚಾಲನೆ ನೀಡಿದರು.

ಮಾತನಾಡಿದ ಅವರು, ‘ಇನ್ನೂ ಒಂದು ವಾರ ಕಾಲ ಭಾರಿ ವಾಹನಗಳ ಓಡಾಟ ನಿಷೇಧ ಹಾಗೇ ಮುಂದುವರಿಯಲಿದೆ. ಜಿಲ್ಲಾಧಿಕಾರಿ ಅವರು ವಾಹನ ಸಂಚಾರಕ್ಕೆ ಪ್ರಮಾಣ ಪತ್ರ ನೀಡಿದ ನಂತರ ಮೊದಲೇ ನಿಗದಿಯಾದಂತೆ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ತಾಲ್ಲೂಕಿನ ಅಂತ್ರವಳ್ಳಿ ಸಮೀಪದ ಬೆಳ್ಳೆ ಗ್ರಾಮದಲ್ಲಿ ಹೆದ್ದಾರಿಗಾಗಿ ಸ್ವಾಧೀನಗೊಂಡ ಜಮೀನು ಮಾಲೀಕರು ವಿದೇಶದಲ್ಲಿ ಇರುವುದರಿಂದ ಪರಿಹಾರ ಹಣ ಪಾವತಿ ವಿಳಂಬವಾಯಿತು.

‘ಆದ್ದರಿಂದ ಅಲ್ಲಿ ಇನ್ನೂ ಕಾಮಗಾರಿ ಬಾಕಿ ಇದೆ. ಹೆದ್ದಾರಿ ಕಾಮಗಾರಿ ನಡೆಯುವಾಗ ಕುಮಟಾ-ಶಿರಸಿ ನಡುವೆ ಓಡಾಡುವ ಜನರಿಗೆ ಅನುಕೂಲ ಆಗಲಿ ಎಂದು ಕುಮಟಾದಿಂದ ದೇವಿಮನೆ ಘಟ್ಟದವರೆಗೆ ಉಚಿತ ಟೆಂಪೋ ಸೌಲಭ್ಯ ಕಲ್ಪಿಸಲಾಗಿತ್ತು. ಕಾಮಗಾರಿ ಶೀಘ್ರ ಮುಕ್ತಾಯಗೊಳ್ಳಲು ಅಧಿಕಾರಿಗಳ ಹಲವು ಸಭೆ ನಡೆಸಲಾಗಿದೆ' ಎಂದರು.

ADVERTISEMENT

‘ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಮಗಾರಿ ವೇಗ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಮನ್ವಯ ಸಾಧಿಸಿದ್ದರು. ಈ ವರ್ಷದ ವಿಪರೀತ ಮಳೆ ಕೂಡ ಕಾಮಗಾರಿ ವಿಳಂಬಕ್ಕೆ ಇನ್ನೊಂದು ಕಾರಣವಾಯಿತು. ಕಾಮಗಾರಿಯಲ್ಲಿ ಏನಾದರೂ ಬಾಕಿ ಅಥವಾ ಲೋಪಗಳಿದ್ದರೆ ಅದನ್ನು ಆರ್.ಎನ್.ಎಸ್ ಕಂಪನಿ ಅಧಿಕಾರಿಗಳಿಗೆ ತಿಳಿಸಿ ಮಾಡಿಸಿಕೊಡಲಾಗುವುದು' ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಗೌಡ, ಜಗದೀಶ ಭಟ್ಟ, ಉಪಾಧ್ಯಕ್ಷ ರವಿ ಹೆಗಡೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಜಾನನ ಪೈ, ಆರ್.ಎಫ್.ಒ ಪ್ರೀತಿ ನಾಯ್ಕ, ಬಿ.ಜೆ.ಪಿ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಐ.ಹೆಗಡೆ, ಜೈವಿಠ್ಠಲ ಕುಬಲ, ಮಹೇಶ ದೇಶಭಂಡಾರಿ, ವಿನಾಯಕ ನಾಯ್ಕ, ವೆಂಕಟೇಶ ನಾಯ್ಕ, ಕಿರಣ ಕಾಮತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.