ADVERTISEMENT

ಭುವನಗಿರಿ ಸಮೀಪ ಭೂಕುಸಿತ: ಸಂಚಾರ ಸ್ಥಗಿತದ ಆತಂಕ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:31 IST
Last Updated 26 ಜುಲೈ 2025, 4:31 IST
ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಸಮೀಪದ ದುಬಾರಿ ಘಟ್ಟದ ತಿರುವಿನಲ್ಲಿ ಭೂಕುಸಿತ ಉಂಟಾಗಿರುವುದು
ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಸಮೀಪದ ದುಬಾರಿ ಘಟ್ಟದ ತಿರುವಿನಲ್ಲಿ ಭೂಕುಸಿತ ಉಂಟಾಗಿರುವುದು   

ಸಿದ್ದಾಪುರ: ಕುಮಟಾ – ಕೊಡಮಡಗಿ ರಾಜ್ಯ ಹೆದ್ದಾರಿಯಲ್ಲಿರುವ ತಾಲ್ಲೂಕಿನ ಭುವನಗಿರಿ ಸಮೀಪದ ದುಬಾರಿ ಘಟ್ಟದ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದು, ಮುಖ್ಯ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗುವ ಆತಂಕ ನಿರ್ಮಾಣವಾಗಿದೆ.

ಕಳೆದ 2-3 ವರ್ಷಗಳಿಂದ ಧರೆ ಕುಸಿತ ಉಂಟಾಗುತ್ತಿದ್ದು, ಈ ಕುರಿತು ಸ್ಥಳೀಯರು ಲೋಕೋಪಯೋಗಿ ಇಲಾಖೆ ಮತ್ತು ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿದ್ದರು.

ಕಳೆದ ವರ್ಷ ತಹಶೀಲ್ದಾರ್‌ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಧರೆಯ ಕೆಳಗಡೆ ಅತಿಕ್ರಮಣ ಜಾಗದಲ್ಲಿ ಮಾಡಿರುವ ಅಡಿಕೆತೋಟದವರು ಧರೆಯ ಮಣ್ಣನ್ನು ತೆಗೆಯುತಿರುವುದರಿಂದ ಧರೆ ಕುಸಿಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ರಸ್ತೆ ಕುಸಿತ ತಡೆಯಲು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ರಸ್ತೆಯ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕುಸಿದಿದ್ದು, ಇದೇ ರೀತಿ ಮಳೆಯಾದರೆ ಸಂಪೂರ್ಣ ಕುಸಿದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.

ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿ ಜಿಲ್ಲೆಯ ಪ್ರಮುಖ ಸಂಪರ್ಕ ಮಾರ್ಗದಲ್ಲೊಂದಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ಭಾಸ್ಕೇರಿ ಹಳ್ಳದ ದಂಡೆಯ ಜನರನ್ನು ಎನ್.ಡಿ.ಆರ್.ಎಫ್ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು

ಮನೆಗಳು ಜಲಾವೃತ, ಕಾಳಜಿ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ

ಹೊನ್ನಾವರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಮಾಣ ಶುಕ್ರವಾರ ಇನ್ನಷ್ಟು ಹೆಚ್ಚಿದ್ದು, ಸಾಮಾನ್ಯರ ಜನಜೀವನ ಅಸ್ತವ್ಯಸ್ತ ಗೊಂಡಿದೆ.

ನದಿ, ಹಳ್ಳಗಳ ದಂಡೆಯಲ್ಲಿರುವ ತಗ್ಗು ಪ್ರದೇಶಗಳಲ್ಲಿನ ಮನೆಗಳು ಜಲಾವೃತಗೊಂಡಿವೆ. ಮಳೆ-ಗಾಳಿಯ ರಭಸಕ್ಕೆ ನೂರಾರು ಮರಗಳು ಉರುಳಿ ಬಿದ್ದಿದ್ದು, ಕೆಲೆವೆಡೆ ಗುಡ್ಡ ಕುಸಿತ ಉಂಟಾಗಿದೆ.

ತಾಲ್ಲೂಕಿನಲ್ಲಿ ಹರಿಯುವ ಗುಂಡಬಾಳ, ಬಡಗಣಿ ನದಿಗಳು, ಭಾಸ್ಕೇರಿ ಹಾಗೂ ಇತರ ಕೆಲ ದೊಡ್ಡ ಹಳ್ಳಗಳಲ್ಲಿ ನೆರೆ ಬಂದಿದೆ.

‘ಗುಡ್ಡೆಬಾಳ, ಗುಂಡಿಬೈಲ್, ಮುಗ್ವ, ಭಾಸ್ಕೇರಿ, ಕಲ್ಕಟ್ಟೆ, ಗುಂಡಬಾಳಾ, ಹೆಬ್ಬೈಲ್ ಮಾಡಗೇರಿ ಸೇರಿದಂತೆ ಒಟ್ಟೂ 9 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆ ಸಂತ್ರಸ್ತರ ಆಕ್ರೋಶ:

ಗುಂಡಬಾಳಾ ನದಿಗೆ ಪ್ರತಿ ವರ್ಷ ಮಳೆಗಾಲದಲ್ಲಿ ಹಲವಾರು ಬಾರಿ ನೆರೆ ಬರುತ್ತಿದೆ. ನದಿ ದಂಡೆಯಲ್ಲಿ ವಾಸಿಸುವ ಜನರಿಗೆ ಮನೆ ನೀಡುವಂತೆ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಮನವಿ ನೀಡುತ್ತ ಬಂದಿದ್ದರೂ ಮನೆ ನೀಡಿಲ್ಲ. ನೆರೆ ಸಂತ್ರಸ್ತರಿಗೆ ನೀಡಲೆಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಕಂದಾಯ ಇಲಾಖೆ ಜಾಗವನ್ನು ಗುರಿತಿಸಿದ್ದರೂ ಅದನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುತ್ತಿಲ್ಲ. ನಮ್ಮ ಗೋಳು ಕೇಳುವವರಿಲ್ಲ’ ಎಂದು ಗುಂಡಿಬೈಲ್ ನ ಗ್ರೇಸಿ ಫರ್ನಾಂಡೀಸ್, ಈಶ್ವರ ಹಳ್ಳೇರ ಮತ್ತಿತರ ನೆರೆ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.