ಶಿರಸಿ: ಯಕ್ಷಗಾನವೇ ಉಸಿರಾಗಿದ್ದ ಹೊಸ್ತೋಟ ಭಾಗವತರು ಯಕ್ಷ ಪದಗಳನ್ನು ಕೇಳುತ್ತಲೇ ಅಂತಿಮಯಾತ್ರೆ ಮುಗಿಸಿದರು.
ಇಲ್ಲಿನ ವಿದ್ಯಾನಗರ ರುದ್ರಭೂಮಿಯ ಆವರಣದಲ್ಲಿ ಮಂಗಳವಾ ಸಂಜೆ ಕಳೇಬರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ನೂರಾರು ಜನರು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಯಕ್ಷಗಾನ ಭಾಗವತರಾದ ಕೇಶವ ಹೆಗಡೆ ಕೊಳಗಿ, ಸತೀಶ ದಂಟ್ಕಲ್, ಗಜಾನನ ಭಟ್ಟ ತುಳಗೇರಿ, ಶ್ರೀನಿವಾಸ ಭಾಗವತ, ರವೀಂದ್ರ ಭಟ್ಟ ಅಚವೆ, ತಿಮ್ಮಪ್ಪ ಭಟ್ಟ ಬಾಳೆಹದ್ದ, ಶಂಕರ ಭಾಗವತ ಗಿರಗಡ್ಡೆ, ಶ್ರೀಧರ ಹೆಗಡೆ ಹಣಗಾರ ಅವರು ‘ನೀನೇ ಕುಣಿಸುವೆ ಜೀವರನು..’ ಪದ್ಯ ಹಾಡುವ ಮೂಲಕ ಮಂಜುನಾಥ ಭಾಗವತರಿಗೆ ಗಾನ ನಮನ ಸಲ್ಲಿಸಿದರು. ಶಂಕರ ಭಾಗವತ ಮದ್ದಲೆ, ವಿಘ್ನೇಶ್ವರ ಕೆಸರಕೊಪ್ಪ, ಪ್ರಸನ್ನ ಹೆಗ್ಗಾರ ಚಂಡೆ ನುಡಿಸಿದರು.
ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಕಲಾವಿದರಾದ ರಾಮಚಂದ್ರ ಜೋಗಿನಮನೆ, ನಾಗರಾಜ ಜೋಶಿ, ಸುಬ್ರಾಯ ಕೆರೆಕೊಪ್ಪ, ಸಂಗೀತಗಾರ ಶ್ರೀಪಾದ ಹೆಗಡೆ ಸೋಮನಮನೆ, ಯಕ್ಷಶಾಲ್ಮಲಾ ಸಂಘಟನೆ ಅಧ್ಯಕ್ಷ ಆರ್.ಎಸ್.ಹೆಗಡೆ, ನಾರಾಯಣ ಗಡೀಕೈ ಇದ್ದರು. ಭಾಗವತರ ಸಹೋದರ ಶಂಕರನಾರಾಯಣ ಭಟ್ಟ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.