ಹೊನ್ನಾವರ: ತಾಲ್ಲೂಕಿನಕಡ್ಲೆಯ ಗೇರು ನೆಡುತೋಪಿನಲ್ಲಿ ಶುಕ್ರವಾರ ಸಂಜೆ ನಡೆದುಕೊಂಡು ಬರುತ್ತಿದ್ದ ಗ್ರಾಮಸ್ಥರೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.ವೆಂಕಟರಮಣ ತಿಮ್ಮಣ್ಣ ಹೆಗಡೆ ಗಾಯಾಳುವಾಗಿದ್ದು, ಚಿರತೆಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡಿದ್ದಾರೆ.
ಸರ್ವೆ ನಂಬರ್ 50ರಲ್ಲಿರುವ ನೆಡುತೋಪಿನಲ್ಲಿ ಬರುತ್ತಿದ್ದಾಗ ಚಿರತೆಯು ಅವರ ಮೇಲೆ ಏಕಾಏಕಿ ಎರಗಿತು.ಈ ಬಗ್ಗೆ ಮಾಹಿತಿ ನೀಡಿದ ಅವರ ಸಂಬಂಧಿ ಗಣೇಶ ಹೆಗಡೆ,‘ವೆಂಕಟರಮಣ ಅವರ ಕುತ್ತಿಗೆಯನ್ನು ಗುರಿಯಾಗಿಟ್ಟು ಚಿರತೆ ದಾಳಿ ಮಾಡಿತ್ತು. ಅದನ್ನು ಗಮನಿಸಿದ ಅವರುಸಮಯಪ್ರಜ್ಞೆ ಮೆರೆದುತಮ್ಮ ಕೈಗಳನ್ನು ಅಡ್ಡವಾಗಿ ಹಿಡಿದರು. ಚಿರತೆಯು ಅವರ ಕೈಗಳಿಗೆ ಕಚ್ಚಿತು. ಗಾಯಗೊಂಡು ನೆಲಕ್ಕೆ ಬಿದ್ದ ಅವರು ಅಲ್ಲೇಕೈಗೆ ಸಿಕ್ಕ ಕಲ್ಲಿನಿಂದ ಚಿರತೆಯ ಮುಖಕ್ಕೆ ಹೊಡೆದರು. ಆಗ ಅದು ಓಡಿಹೋಗಿದ್ದರಿಂದ ಅವರ ಜೀವ ಉಳಿಯಿತು’ ಎಂದು ತಿಳಿಸಿದರು.
ಗಾಯಾಳುವಿಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.