ಕಾರವಾರ:ಕೊರೊನಾ ವೈರಸ್ ಪ್ರಭಾವ ಕಾರವಾರ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ವರ್ತಕರು ಚಿಂತೆಗೀಡಾಗಿದ್ದಾರೆ.
‘ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಸ್ವಲ್ಪ ವ್ಯಾಪಾರವಾದರೆ ಮೊದಲಿನಂತೆ ಸಂಜೆ ಗ್ರಾಹಕರು ಬರುತ್ತಿಲ್ಲ. ತರಕಾರಿ ದರದಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ. ಆದರೂ ಕೊರೊನಾ ವೈರಸ್ ಭೀತಿಯಿಂದ ಜನರು ಮಾರುಕಟ್ಟೆಯತ್ತ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತಂದಿರುವ ತರಕಾರಿ ಒಣಗುತ್ತಿದ್ದು, ನಷ್ಟವಾಗುವ ಆತಂಕವಿದೆ’ ಎನ್ನುತ್ತಾರೆ ತರಕಾರಿ ವರ್ತಕ ಸಂಗಮೇಶ.
ಈ ವಾರ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ದರ ಹಿಂದಿನ ವಾರದ ದರದ ಆಸುಪಾಸಿಲ್ಲೇ ಇದೆ. ಜವಾರಿ ಟೊಮೆಟೊ ಪ್ರತಿ ಕೆ.ಜಿ.ಗೆ ₹ 20, ಫಾರಂ ಟೊಮೆಟೊ ₹ 25ರಂತೆ ಮಾರಾಟವಾಗುತ್ತಿದೆ.ಲಿಂಬು ₹ 10ಕ್ಕೆ ನಾಲ್ಕು, ಈರುಳ್ಳಿ ಕೆ.ಜಿ.ಗೆ ₹ 20ರಿಂದ ₹ 25, ಬೆಂಡೆಕಾಯಿ ₹ 60, ಬೀನ್ಸ್ ₹ 60, ಬೀಟ್ರೂಟ್ ₹ 40, ಕ್ಯಾಪ್ಸಿಕಂ ₹ 50, ಜವಾರಿ ಬೆಳ್ಳುಳ್ಳಿ ₹ 60, ಫಾರಂ ಬೆಳ್ಳುಳ್ಳಿ ₹ 140, ಕ್ಯಾಬೇಜ್ ₹ 20, ಕ್ಯಾರೆಟ್ ₹ 60, ಶುಂಠಿ ₹ 80, ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪಿಗೆ ₹ 30, ತೊಂಡೆಕಾಯಿ ₹ 40, ಹಾಗೂ ಹಸಿಮೆಣಸು ₹ 50ರಿಂದ ₹ 60ರಂತೆದರವಿದೆ.
ಸ್ವಸ್ತಿಕ್ ಹಳೆಯ ಅಕ್ಕಿಯು 25 ಕೆ.ಜಿ ಚೀಲವೊಂದಕ್ಕೆ ₹ 950 ಇದೆ. ಶೇಂಗಾ ಹಿಂದಿನವಾರ ₹160ರಿಂದ ₹120ಕ್ಕೆ ಇಳಿಕೆಯಾಗಿತ್ತು. ಸದ್ಯ ಇದರ ದರವು ಸ್ಥಿರವಾಗಿದೆ. ಸಕ್ಕರೆ ₹ 40, ಪಾಮ್ ಆಯಿಲ್ ಲೀಟರ್ಗೆ ₹ 90, ಜೋಳ ₹ 38, ತೊಗರಿಬೇಳೆ ₹ 100ರಲ್ಲಿ ಸ್ಥಿರವಾಗಿದೆ.
ಮೀನು ದರ ಏರಿಳಿತ:ಮೀನು ಮಾರುಕಟ್ಟೆಯಲ್ಲಿ ದರದ ಏರಿಳಿತವಾಗಿದೆ.ದೊಡ್ಡ ಬಂಗಡೆ ಮೀನು ₹ 100ಕ್ಕೆ ಎರಡು, ಮಧ್ಯಮ ಗಾತ್ರದ್ದು ₹ 200ಕ್ಕೆ 6, ಸಣ್ಣ ಬಂಗಡೆಗಳು ₹ 100ಕ್ಕೆ 8 ಸಿಗುತ್ತಿವೆ.
ಪ್ರತಿ ಪಾಲು ಸೆಟ್ಲೆಗೆ ₹ 200ರಿಂದ ₹ 400 ದರವಿದೆ. ದೊಡ್ಡ ಪಾಂಫ್ರೆಟ್ ₹ 1,000ಕ್ಕೆ ಎರಡು, ಮಧ್ಯಮ ಗಾತ್ರದವು ₹ 500ಕ್ಕೆ ಮೂರು ಮಾರಾಟವಾಗುತ್ತಿವೆ. ಲೆಪ್ಪೆ ₹ 50ಕ್ಕೆ ಪಾಲು, ಮಾಣ್ಕೆ ಅಥವಾಲುಸ್ಕಾ ₹ 200ಕ್ಕೆ ಪಾಲು, ಏಡಿ ಗಾತ್ರಕ್ಕೆ ಅನುಗುಣವಾಗಿ ಪಾಲಿಗೆ ₹ 100ರಿಂದ ₹ 200,ಇಸೋಣ್ 5ಕ್ಕೆ ₹ 500ಯಂತೆ ಬಿಕರಿಯಾಗುತ್ತಿವೆ.
ಮೊಟ್ಟೆಯು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ₹ 6ಕ್ಕೆ ಒಂದರಂತೆ ಸಿಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.