ಶಿರಸಿ: ಅಡಿಕೆ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪೂರಕವಾಗಿ ಮಣ್ಣಿನ ಆಮ್ಲೀಯತೆ ಸರಿಪಡಿಸಲು ಹಾಗೂ ಅಡಿಕೆ ಮರಗಳು ಪೋಷಕಾಂಶ ಹೀರಿಕೊಳ್ಳಲು ಅನುಕೂಲ ಮಾಡಲು ತೋಟದಲ್ಲಿ ಸುಣ್ಣ ಬಳಕೆಗೆ ಬೆಳೆಗಾರರು ಮುಂದಾಗಿದ್ದಾರೆ. ಬೇಡಿಕೆಗೆ ತಕ್ಕಷ್ಟು ಸುಣ್ಣ ಸಿಗದ ಕಾರಣ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
‘ಪ್ರಸಕ್ತ ವರ್ಷದ ಮಳೆಯಿಂದ ಅಡಿಕೆ ತೋಟಗಳ ಮಣ್ಣು ಸತ್ವ ಕಳೆದು ಕೊಂಡಿದೆ. ಹಾನಿಕಾರಕ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಅಡಿಕೆ, ಕಾಳುಮೆಣಸು ಬೆಳೆಗೆ ತೀವ್ರ ಬಾಧೆ ನೀಡುತ್ತಿವೆ. ಅಡಿಕೆಯಲ್ಲಿ ಕೊಳೆ, ಕಾಯಿ ಉದುರುವಿಕೆ, ಸುಳಿಕೊಳೆ, ಎಲೆಚುಕ್ಕಿ ರೋಗ ಸಾಮಾನ್ಯವಾದರೆ, ಕಾಳುಮೆಣಸಿನಲ್ಲಿ ಎಲೆಕೊಳೆ, ಸೊರಗುರೋಗ ಕಾಣಿಸಿಕೊಂಡು ನಷ್ಟಕ್ಕೆ ಕಾರಣವಾಗುತ್ತಿದೆ’ ಎಂಬುದು ಅಡಿಕೆ ಬೆಳೆಗಾರರ ದೂರು.
ಮಣ್ಣಿನ ಆಮ್ಲೀಯತೆ ಸರಿಪಡಿಸಲು ಹಾಗೂ ಅಡಿಕೆ, ಬಾಳೆ ಮರಗಳು, ಕಾಳುಮೆಣಸು ಬಳ್ಳಿಗಳು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಅನುಕೂಲ ಮಾಡಲು ಸುಣ್ಣ ಬಳಕೆಗೆ ರೈತರು ಮುಂದಾಗಿದ್ದಾರೆ. ಆದರೆ ಅಗತ್ಯಕ್ಕೆ ತಕ್ಕಷ್ಟು ಸುಣ್ಣ ಇಲಾಖೆಗಳಿಂದಾಗಲೀ, ಸಹಕಾರ ಸಂಘಗಳಿಂದಾಗಲಿ ಲಭಿಸುತ್ತಿಲ್ಲ ಎಂಬ ದೂರುಗಳಿವೆ.
‘ಮಣ್ಣಿನ ಸತ್ವ ವೃದ್ಧಿಸುವ ಉದ್ದೇಶಕ್ಕೆ ಗೊಬ್ಬರ ಹಾಕುವ 15 ದಿನ ಮೊದಲು ಸುಣ್ಣವನ್ನು ಕಡ್ಡಾಯವಾಗಿ ನೀಡಲೇಬೇಕು. ತೋಟಗಾರಿಕಾ ಇಲಾಖೆಯಲ್ಲಿ ಅಡಿಕೆ ಬೆಳೆಗಾರರಿಗೆ ನೇರವಾಗಿ ಸಹಾಯಧನದಡಿ ಸುಣ್ಣ ನೀಡುವುದಿಲ್ಲ. ರೈತರು ಸುಣ್ಣ ಖರೀದಿಸಿದ ಬಿಲ್ ನೀಡಿದರೆ ಹೆಕ್ಟೇರ್ಗೆ ₹1,500 ನೀಡುತ್ತಾರೆ. ಅದರಲ್ಲಿ ತೋಟದ ನಿರ್ವಹಣೆಯೂ ಸೇರಿಕೊಂಡಿರುವ ಕಾರಣ ಆ ಸಹಾಯಧನ ಸಾಲುವುದಿಲ್ಲ. ಕೃಷಿ ಇಲಾಖೆಯಲ್ಲಿ ಕೇವಲ 5 ಚೀಲ ಸುಣ್ಣ ನೀಡುತ್ತಾರೆ. ಪ್ರತಿ ಅಡಿಕೆ ಮರಕ್ಕೆ ಅರ್ಧ ಕೆಜಿ ಸುಣ್ಣ ಕನಿಷ್ಠ ಬಳಸಬೇಕು. ಇಲಾಖೆ ನೀಡುವ ಸಹಾಯಧನ ಯಾವುದಕ್ಕೂ ಸಾಲದು. ಸಹಕಾರಿ ಸಂಘಗಳಲ್ಲಿಯೂ ಸುಣ್ಣದ ಸಂಗ್ರಹ ಕೊರತೆಯಿದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರ ರಾಮಚಂದ್ರ ಹೆಗಡೆ.
‘ಎಲೆಚುಕ್ಕಿ ರೋಗ ಬೆಳೆಗಾರರ ಕೈಮೀರುತ್ತಿದೆ. ಕೊಳೆ ರೋಗ ಈಗಾಗಲೇ ಅರ್ಧ ಅಡಿಕೆ ಬೆಳೆ ಆಪೋಷನ ಪಡೆದಿದೆ. ಈ ಸಂದರ್ಭದಲ್ಲಿ ಅಗತ್ಯದಷ್ಟು ಸುಣ್ಣವನ್ನು ಮಣ್ಣಿಗೆ ನೀಡಿದ್ದರೆ ಈ ಸಮಸ್ಯೆಗಳು ಹತೋಟಿಗೆ ಬರುತ್ತಿತ್ತು’ ಎಂದರು.
‘ಅತಿಯಾದ ಮಳೆಯ ಕಾರಣಕ್ಕೆ ಚಿಪ್ಪೆಸುಣ್ಣದ ಕೊರತೆಯಿದೆ. ಡೊಲೊಮೈಟ್ ಸುಣ್ಣ ಇನ್ನಷ್ಟೇ ಅಂಗಡಿಗಳಿಗೆ ಪೂರೈಕೆಯಾಗಬೇಕು’ ಎನ್ನುತ್ತಾರೆ ವ್ಯಾಪಾರಿಗಳು.
ಒಬ್ಬ ರೈತನಿಗೆ 50 ಕೆಜಿಯ ಒಂದು ಚೀಲಕ್ಕೆ ₹105 ಸಹಾಯಧನದಡಿ 5 ಚೀಲ ಸುಣ್ಣ ನೀಡಲಾಗುವುದು. ಕೃಷಿ ಇಲಾಖೆ ಸಂಪರ್ಕಿಸಿ ಸುಣ್ಣ ಪಡೆಯಬಹುದುಟಿ.ನಟರಾಜ ಕೃಷಿ ಇಲಾಖೆ ಉಪನಿರ್ದೇಶಕ
ಹಲವು ಸಮಸ್ಯೆ ನಿವಾರಣೆ
‘ಡೊಲೊಮೈಟ್ ಸುಣ್ಣ ಹಾಗೂ ಚಿಪ್ಪಿನ ಸುಣ್ಣ ಬಳಸುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಳೆ ಕಡಿಮೆಯಿರುವ ಈ ಸಂದರ್ಭದಲ್ಲಿ ಸುಣ್ಣ ನೀಡಿದರೆ ಅದರಲ್ಲಿನ ಕ್ಯಾಲ್ಶಿಯಂ ಮತ್ತು ಮ್ಯಾಗ್ನೇಶಿಯಂ ಅಂಶಗಳು ಮಣ್ಣಿನ ನಂಜು ಗುಣ ನಿವಾರಿಸುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾ ಬೆಳವಣಿಗೆ ಸಹ ನಿಯಂತ್ರಿಸುತ್ತವೆ. ಅನಾರೋಗ್ಯ ಲಕ್ಷಣಗಳಿರುವ ಸಸಿಗಳು ಸಹ ಸುಣ್ಣ ಹಾಕುವುದರಿಂದ ಬೇಗನೆ ಚೇತರಿಸಿಕೊಳ್ಳುತ್ತವೆ. ಬೇರಿನ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.