ಕಾರವಾರ: ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮೇ 4ರಿಂದ ಅವಕಾಶ ನೀಡಲಾಗಿದ್ದು, ನಗರದ ವಿವಿಧ ಮದ್ಯ ಮಾರಾಟ ಮಳಿಗೆಗಳ ಎದುರು ಭಾನುವಾರ ಸಿದ್ಧತೆ ಕೈಗೊಳ್ಳಲಾಯಿತು.
ಮಳಿಗೆಗಳ ಮುಂದೆ ಒಂದು ಬಾರಿಗೆ ಕೇವಲ ಐವರು ಗ್ರಾಹಕರು ನಿಲ್ಲಲು ಅವಕಾಶ ನೀಡಲಾಗಿದೆ. ಅಲ್ಲದೇ ಅವರ ನಡುವೆ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಅಬಕಾರಿ ಆಯುಕ್ತರು ಸೂಚನೆ ನೀಡಿದ್ದಾರೆ. ಆದ್ದರಿಂದ ಜಿಲ್ಲೆಯ ವಿವಿಧೆಡೆ ಮಳಿಗೆಗಳ ಎದುರು ಬಿಳಿಯ ಬಣ್ಣದಲ್ಲಿ ವೃತ್ತಗಳನ್ನು ಬರೆಯಲಾಯಿತು.ಮಳಿಗೆಗಳ ಮುಂದೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಯಿತು.ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಮಳಿಗೆಗಳು ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ವಹಿವಾಟು ನಡೆಸಲು ಅವಕಾಶವಿದೆ.ಕೋವಿಡ್ 19 ಸೋಂಕು ಇರುವ ವಲಯಗಳನ್ನು ಹೊರತು ಪಡಿಸಿ ಇತರ ಕಡೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಸಿ.ಎಲ್ 2 ಮತ್ತು ಎಂ.ಎಸ್.ಐ.ಎಲ್ ಮದ್ಯ ಮಳಿಗೆಗಳಲ್ಲಿ ಹಾಗೂ ಕೆ.ಎಸ್.ಬಿ.ಸಿ.ಎಲ್ ಡಿಪೊಗಳಲ್ಲಿ ವಹಿವಾಟು ನಡೆಸಬಹುದು.
ಗ್ರಾಹಕರು ಮತ್ತು ಮಳಿಗೆಗಳ ಸಿಬ್ಬಂದಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಸ್ಯಾನಿಟೈಸರ್ ಬಳಕೆಯನ್ನೂ ಮಾಡಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ. ಒಂದುವೇಳೆ, ಈ ಷರತ್ತುಗಳ ಉಲ್ಲಂಘನೆಯಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.