ಕುಮಟಾ: ವರಕವಿ ಬೇಂದ್ರೆ ಅವರ ಪ್ರಸಿದ್ಧ ಕವಿತೆ `ನಾಕು ತಂತಿ’ ಬದುಕಿನ ಸಮನ್ವಯದ ಸಾರವನ್ನು ಜಗತ್ತಿಗೆ ಸಾರುತ್ತದೆ. ಬದುಕು-ಸಂಸ್ಕೃತಿ ನಡುವಿನ ಸಂಬಂಧ ಗಟ್ಟಿಯಾದಾಗ ನಮ್ಮ ಇರುವಿಕೆ ಸುಂದರವಾಗುತ್ತದೆ ಎನ್ನುವುದೇ ನಾಕುತಂತಿಯ ಸಾರ ಎಂದು ಹಿರಿಯ ಸಾಹಿತಿ ಪುಟ್ಟು ಕುಲಕರ್ಣಿ ಹೇಳಿದರು.
ಕ.ಸಾ.ಪ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಶನಿವಾರ ಪಟ್ಟಣದ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ದ.ರಾ. ಬೇಂದ್ರೆಯವರ ‘ನಾಕು ತಂತಿ’ ಕುರಿತ ಉಪನ್ಯಾಸ ಕಾಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ, ‘ವಿಶ್ವ ಮಟ್ಟದ ಕನ್ನಡ ಕವಿ ಬೇಂದ್ರೆ ಅವರ ಕಾವ್ಯ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ. ಮತ್ತೆ ಮತ್ತೆ ಓದುವ ಕಾವ್ಯಾಸಕ್ತಿಯಿಂದ, ಚರ್ಚೆಯಿಂದ ಬೇಂದ್ರೆ ಕಾವ್ಯದ ಸೊಗಸನ್ನು ಸವಿಯಬಹುದಾಗಿದೆ. ಅವರ ಮಹತ್ತರ ಕವಿತೆ ‘ನಾಕುತಂತಿ’ ಕುರಿತು ಕ.ಸಾ.ಪ ವಿಶೇಷ ಉಪನ್ಯಾಸ ಏರ್ಪಡಿಸಿರುವುದು ಬೇಂದ್ರೆಯವರನ್ನು ಎಳೆಯ ಸಾಹಿತಿಗಳು ಅರಿಯಲು ಸಹಕಾರಿಯಾಗಿದೆ ಎಂದರು.
ಸಾಹಿತಿ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ, ಸಾಹಿತ್ಯದಲ್ಲಿ ಹದಗೊಂಡವರು ಮಾತ್ರ ಬೇಂದ್ರೆ ಕಾವ್ಯದ ಸೊಗಸನ್ನು ಅರಿಯಲು ಸಾಧ್ಯ. ತಮ್ಮ ಬದುಕಿನ ಸಂಕಷ್ಟಗಳನ್ನೇ ಬೇಂದ್ರೆ ಕಾವ್ಯ ರೂಪದಲ್ಲಿ ಸಾಹಿತ್ಯ ಲೋಕಕ್ಕೆ ಕೊಟ್ಟರು ಎಂದರು.
ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕರಾದ ಆರ್.ಎಲ್. ಭಟ್ಟ, ಶಾಂತೇಶ ನಾಯಕ, ವೀಣಾ ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.