ADVERTISEMENT

ಕೋವಿಡ್‌ನಿಂದ ಪ್ರಾಣಬಿಟ್ವವರ ಶವ ಸಂಸ್ಕಾರಕ್ಕೆ ಕಾರವಾರದಲ್ಲಿ ವಿರೋಧ

ಕೋವಿಡ್‌ನಿಂದ ಮೃತಪಟ್ಟ ಶಿರಸಿಯ ವ್ಯಕ್ತಿ: ರಸ್ತೆ ಬದಿಯಲ್ಲೇ ಸುಡಬೇಕಾದ ಅನಿವಾರ್ಯತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 12:51 IST
Last Updated 7 ಜುಲೈ 2020, 12:51 IST
ಕಾರವಾರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ಮಾಡಿದ ಜಾಗಕ್ಕೆ ಮಂಗಳವಾರ ಲಾರಿಯಲ್ಲಿ ಮಣ್ಣು ಸುರಿಯಲಾಯಿತು
ಕಾರವಾರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ಮಾಡಿದ ಜಾಗಕ್ಕೆ ಮಂಗಳವಾರ ಲಾರಿಯಲ್ಲಿ ಮಣ್ಣು ಸುರಿಯಲಾಯಿತು   

ಕಾರವಾರ: ಕೋವಿಡ್‌ನಿಂದ ಸೋಮವಾರ ಮೃತಪಟ್ಟ ಶಿರಸಿ ತಾಲ್ಲೂಕಿನ 42 ವರ್ಷದ ವ್ಯಕ್ತಿಯ (ರೋಗಿ ಸಂಖ್ಯೆ ಯು.ಕೆ. 410) ಅಂತ್ಯಸಂಸ್ಕಾರದ ವಿಚಾರವುನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಅಂತ್ಯಸಂಸ್ಕಾರಕ್ಕೆಕೆಲವರುವಿರೋಧ ವ್ಯಕ್ತಪಡಿಸಿದರೆ, ಅಧಿಕಾರಿಗಳು ರಾತ್ರಿಯಿಡೀ ಪರ್ಯಾಯ ಜಾಗವನ್ನು ಹುಡುಕಲು ನಿದ್ದೆಗೆಟ್ಟರು.

ಮೃತರ ಶವವನ್ನು ಊರಿಗೆ ತರುವುದು ಬೇಡ ಎಂದು ಅವರ ಕುಟುಂಬದವರು ತಿಳಿಸಿದ್ದರು. ಆದ್ದರಿಂದ ಜಿಲ್ಲಾಡಳಿತವು ಕೋಡಿಬಾಗದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಸಜ್ಜಾಗಿತ್ತು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ಒಟ್ಟಾದ ಸ್ಥಳೀಯರು, ಸ್ಮಶಾನಕ್ಕೆ ಶವ ತರದಂತೆ ಆಗ್ರಹಿಸಿದರು. ಶಾಸಕಿ ರೂಪಾಲಿ ನಾಯ್ಕ ಕೂಡಬೇರೆ ಜಾಗವನ್ನು ಹುಡುಕುವಂತೆ ಒತ್ತಾಯಿಸಿದ್ದರು.

ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಸೈಲ್, ನಗರಸಭೆ ಸದಸ್ಯರಾದ ಪಾಂಡುರಂಗ ರೇವಂಡಿಕರ್, ರೇಷ್ಮಾ ಮಾಳ್ಸೇಕರ್, ಶಿಲ್ಪಾ ನಾಯ್ಕ, ಚಿತ್ತಾಕುಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ, ಮುಖಂಡರಾದ ರತ್ನಾಕರ ನಾಯ್ಕ, ದೇವಿದಾಸ ನಾಯ್ಕ, ಶ್ಯಾಮ್ ಸೈಲ್ ಸೇರಿದಂತೆ ಹತ್ತಾರು ಮಂದಿ ಪ್ರಮುಖರೂ ಸ್ಥಳಕ್ಕೆ ಬಂದು ಸ್ಥಳೀಯರ ವಿರೋಧಕ್ಕೆ ದನಿಗೂಡಿಸಿದರು.

ADVERTISEMENT

ತಹಶೀಲ್ದಾರ್ ಆರ್.ವಿ.ಕಟ್ಟಿ, ನಗರಸಭೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಆರ್.ಪಿ.ನಾಯ್ಕ, ಸಿಪಿಐ ಸಂತೋಷಕುಮಾರ ಸ್ಥಳದಲ್ಲಿ ಹಾಜರಿದ್ದರು. ಅವರು ಸ್ಥಳೀಯರ ಮನವೊಲಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಅಧಿಕಾರಿಗಳು ಪರ್ಯಾಯ ಸ್ಥಳದ ಹುಡುಕಾಟ ನಡೆಸುತ್ತಿರುವ ವಿಚಾರ ತಿಳಿದ ಸದಾಶಿವಗಡ, ಸುಂಕೇರಿ, ದೋಬಿಘಾಟ ಸುತ್ತಮುತ್ತಲಿನ ಜನರು ಆಯಾ ಭಾಗದಸ್ಮಶಾನಗಳಿಗೆ ಕಾವಲು ನಿಂತರು. ಇದರಿಂದಶವ ಸಂಸ್ಕಾರಕ್ಕೆ ಬೇರೆ ಜಾಗವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿ ಅಧಿಕಾರಿಗಳು ಉಭಯ ಸಂಕಟಕ್ಕೆ ಸಿಲುಕಿದರು.

ಇಷ್ಟೆಲ್ಲ ಬೆಳವಣಿಗೆಗಳು ಆಗುವಾಗ ತಡರಾತ್ರಿ ಆಗಿತ್ತು. ಕೊನೆಗೆ ಬಿಣಗಾ ಸಮೀಪದ ಕಲ್ಲು ಕ್ವಾರಿಯೊಂದರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಟ್ಟಿಗೆಯಿಟ್ಟು ಶವವನ್ನು ಸುಡಲಾಯಿತು.

ಬಿಣಗಾದಲ್ಲಿ ಆಕ್ಷೇಪ:ಕೋವಿಡ್‌ನಿಂದ ಮೃತರ ಶವವನ್ನು ಸೂಕ್ತ ರೀತಿಯಲ್ಲಿ ಸುಟ್ಟಿಲ್ಲ ಎಂದು ಬಿಣಗಾದ ಸ್ಥಳೀಯರು ಆರೋಪಿಸಿದರು. ಗುಡ್ಡದ ಮೇಲಿನಿಂದ ನೀರು ಹರಿಯುವ ಜಾಗದಲ್ಲೇ ಶವವನ್ನು ಸುಡಲಾಗಿದೆ. ಸೀಮೆ ಎಣ್ಣೆಯ ಕ್ಯಾನ್‌ ಅನ್ನೂ ಸ್ಥಳದಲ್ಲೇ ಬಿಡಲಾಗಿತ್ತು. ಜನ ಸಂಚಾರ ಇರುವ ಪ್ರದೇಶದಲ್ಲಿ ಶವವನ್ನು ಸುಟ್ಟರೂ ಅಲ್ಲಿ ಸೋಂಕು ನಾಶಕವನ್ನು ಸಿಂಪಡಿಸಿಲ್ಲ ಎಂದು ನಗರಸಭೆ ಸದಸ್ಯ ಪ್ರಕಾಶ ಪಿ.ನಾಯ್ಕ, ಮುಖಂಡರಾದ ರಾಜೇಂದ್ರ ಅಂಚೇಕರ, ಸತೀಶ ನಾಯ್ಕ, ನಾಗರಾಜ ಗೌಡ ಮುಂತಾದವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.