ADVERTISEMENT

ಒಂದೇ ದಿನ 5,271 ಪ್ರಕರಣ ಇತ್ಯರ್ಥ

ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್‌ಗೆ ಉತ್ತಮ ಸ್ಪಂದನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 15:10 IST
Last Updated 27 ಮಾರ್ಚ್ 2021, 15:10 IST
ಕಾರವಾರದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಅರ್ಜಿಗಳನ್ನು ಸ್ವೀಕರಿಸಿದರು
ಕಾರವಾರದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಅರ್ಜಿಗಳನ್ನು ಸ್ವೀಕರಿಸಿದರು   

ಕಾರವಾರ: ಜಿಲ್ಲೆಯ 24 ಪೀಠಗಳಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ಗೆ ಉತ್ತಮ ಸ್ಪಂದನ ವ್ಯಕ್ತವಾಯಿತು. ಒಂದೇ ದಿನ 5,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಅಡಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಲೋಕ ಅದಾಲತ್ ಹಮ್ಮಿಕೊಳ್ಳಲಾಯಿತು.

ಜಿಲ್ಲೆಯಾದ್ಯಂತ ಒಟ್ಟು 60 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 9,535 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಪರಿಗಣಿಸಲಾಯಿತು. ಅವುಗಳಲ್ಲಿ 16 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 5,271 ಪ್ರಕರಣಗಳು ಸೇರಿದಂತೆ ಒಟ್ಟೂ 5,287 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು.

ADVERTISEMENT

ನೀರಿನ ಹಾಗೂ ಇತರ ಶುಲ್ಕಗಳಿಗೆ ಸಂಬಂಧಿಸಿದಂತೆ 50 ಪ್ರಕರಣಗಳಲ್ಲಿ 15ನ್ನು ರಾಜಿ ಸಂಧಾನ ಮಾಡಲಾಯಿತು. ಇತರ ಸಿವಿಲ್ ಪ್ರಕರಣಗಳಲ್ಲಿ 10ನ್ನು ಗುರುತಿಸಲಾಗಿತ್ತು. ಅವುಗಳಲ್ಲಿ ಒಂದು ವಿಲೇವಾರಿಯಾಯಿತು. 241 ರಾಜಿಯಾಗಬಲ್ಲ ಅಪರಾಧ ಪ್ರಕರಣಗಳಲ್ಲಿ 68, ಚೆಕ್ ಅಮಾನ್ಯದ 1,970 ಪ್ರಕರಣಗಳಲ್ಲಿ 441ನ್ನು ಬಗೆ ಹರಿಸಲಾಯಿತು.

84 ಬ್ಯಾಂಕ್ ಪ್ರಕರಣಗಳ ಪೈಕಿ 27ನ್ನು, 484 ಮೋಟರು ವಾಹನ ವ್ಯಾಜ್ಯಗಳಲ್ಲಿ 96ನ್ನು, 48 ವೈವಾಹಿಕ ಹಾಗೂ ಕುಟುಂಬ ನ್ಯಾಯಾಲಯ ಪ್ರಕರಣಗಳಲ್ಲಿ 7ನ್ನು ಪರಿಹರಿಸಲಾಯಿತು. 1,801 ಇತರ ಸಿವಿಲ್ ಪ್ರಕರಣಗಳಲ್ಲಿ 400 ಹಾಗೂ 4,871 ಇತರ ಕ್ರಿಮಿನಲ್ ವ್ಯಾಜ್ಯಗಳಲ್ಲಿ 4,232ನ್ನು ರಾಜಿ ಮಾಡಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು ₹ 16.81 ಕೋಟಿಗೂ ಅಧಿಕ ಮೊತ್ತದ ರಾಜಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.