ADVERTISEMENT

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಮದ್ನೂರು ಗ್ರಾ.ಪಂ. ಸದಸ್ಯರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 7:20 IST
Last Updated 8 ಫೆಬ್ರುವರಿ 2021, 7:20 IST
   

ಯಲ್ಲಾಪುರ: ತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಮೂವರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಒಬ್ಬ ಕಾರ್ಯಕರ್ತನ ಮೇಲೆ ಭಾನುವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ.

ಗ್ರಾಮ‌ ಪಂಚಾಯ್ತಿಯ 13 ಸದಸ್ಯರೂ ಬಿ.ಜೆ.ಪಿ ಬೆಂಬಲಿತರಾಗಿದ್ದಾರೆ. ಸದಸ್ಯರ ಪೈಕಿ ಆರು ಮಂದಿ ದನಗರ ಗೌಳಿ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅಧ್ಯಕ್ಷ ಸ‌್ಥಾನಕ್ಕೆ ಹಿಂದುಳಿದ 'ಅ' ವರ್ಗದ ಮಹಿಳೆ ಮೀಸಲಾತಿ ಬಂದಿದೆ. ಹಾಗಾಗಿ ತಮ್ಮ ಸಮಾಜಕ್ಕೇ ಅಧ್ಯಕ್ಷ ಹುದ್ದೆ ನೀಡಬೇಕೆಂದು ವಿನಂತಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪದ ಕೆಲವರು ಬೇರೆ ಸಮುದಾಯದವರನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

ಭಾನುವಾರ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಗೌಳಿ ಸಮುದಾಯಕ್ಕೆ ಹುದ್ದೆ ನೀಡದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡರು. ಗೌಳಿ ಸಮುದಾಯದವರು ವಿಟ್ಟು ಬೊಮ್ಮು ಸೆಳಕೆ, ಲಕ್ಕು ಗಾವಡೇ ಹಾಗೂ ಬಾಪು ತಾಟೆ ಎಂಬುವವರನ್ನು ಕರೆದುಕೊಂಡು ಹೋಗಬಹುದು ಎಂಬ ಶಂಕೆಯಿಂದ ಊರಿನಿಂದ ಮುಖಂಡರುಬಹೊರಗೆ ಕರೆದುಕೊಂಡು ಹೋಗುತಿದ್ದರು. ಕಲಘಟಗಿಯ ಧಾರವಾಡ ಕ್ರಾಸ್ ಬಳಿ ಢಾಬಾವೊಂದರಲ್ಲಿ ಊಟ ಮಾಡುತ್ತಿದ್ದವರ ಮೇಲೆ ಕಿರವತ್ತಿಯ ಹಾಗೂ ಕಲಘಟಗಿಯ ಕೆಲವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.

ADVERTISEMENT

ಇವರನ್ನು ಹಿಂಬಾಲಿಸಿ ಹೋದ ಗೌಳಿ ಸಮುದಾಯದ ಕೆಲವರು ಹಲ್ಲೆ ನೋಡಿ ಮಾಹಿತಿ ನೀಡಿದ್ದಾರೆ. ನಂತರ ಕಿರವತ್ತಿಯಿಂದ ಬಂದ ಯುವಕರು ಹಲ್ಲೆ ನಡೆದ ಗ್ರಾಮ ಪಂಚಾಯ್ತಿ ಸದಸ್ಯರಾದ ವಿಟ್ಟು ಸೆಳಕೆ, ಬಾಪು ತಾಟೆ ಅವರನ್ನು ಹಾಗೂ ಸದಸ್ಯರನ್ನು ಕರೆದುಕೊಂಡು ಹೋಗುತ್ತಿದ್ದ ಕಾರ್ಯಕರ್ತ ಸೋಮು ಜಂಗ್ಲೆ ಅವರಿಗೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಬ್ಬ ಲಕ್ಕು ಗಾವಡೆ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಗೌಳಿಗರು ಆರೋಪಿಸುತ್ತಿದ್ದಾರೆ.

ಹಲ್ಲೆ ನಡೆಸಿದ 8 ಜನರ ಮೇಲೆ ಗೌಳಿ ಸಮುದಾಯದವರು ದೂರು ದಾಖಲಿಸಿದ್ದಾರೆ.

ಹಲ್ಲೆಯನ್ನು ಖಂಡಿಸಲು, ಮುಂದಿನ ನಿರ್ಣಯ ಕೈಗೊಳ್ಳಲು ಸೋಮವಾರ ಬೆಳಿಗ್ಗೆ ಗೌಳಿ ಸಮುದಾಯದ ಜನರು ಕಿರವತ್ತಿಯಲ್ಲಿ‌ ಸೇರಿದ್ದಾರೆ.

'ಘಟನೆಯ ಕುರಿತು ಜಿಲ್ಲಾ ಘಟಕಕ್ಕೆ ವರದಿ ಕಳುಹಿಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಜಿ.ಎನ್.ಗಾಂವ್ಕರ್ ಪ್ರತಿಕ್ರಿಯಿಸಿದ್ದಾರೆ.

'ನನ್ನ‌ಮೇಲೆ ವೃಥಾ ಆರೋಪ':
'ಮದ್ನೂರು ಘಟನೆಗೆ ಸಂಬಂಧಿಸಿದಂತೆ ನನ್ನ ಪಾತ್ರ ಏನೂ ಇಲ್ಲ. ಭಾನುವಾರ ದಿನಪೂರ್ತಿ ಯಲ್ಲಾಪುರದಲ್ಲಿಯೇ ಇದ್ದೆ. ಘಟನೆಗೂ ನನಗೂ ಏನೂ ಸಂಬಂಧವಿಲ್ಲ. ವಿನಾ ಕಾರಣ ನನ್ನ ಹೆಸರನ್ನು ಇದರಲ್ಲಿ ಎಳೆಯಲಾಗುತ್ತಿದೆ' ಎಂದು ಬಿ.ಜೆ.ಪಿ ಮುಖಂಡ ವಿಜಯ್ ಮಿರಾಶಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.