
ಕಾರವಾರ: ತಾಲ್ಲೂಕಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದೆನಿಸಿರುವ ಮಾಘ ಹುಣ್ಣಿಮೆ (ಮಾರ್ಕೆ ಪೂನವ್) ಸೋಮವಾರ ಸಡಗರದಿಂದ ನಡೆಯಿತು. ಮಾಜಾಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಸಂಭ್ರಮಕ್ಕೆ ಸಾಕ್ಷಿಯಾದರು.
ಕನಕಾಂಬರ ಹೂವಿನಿಂದ ಅಲಂಕೃತಗೊಂಡ ಬಂಡಿ (ರಥ) ಎಳೆಯುವ ಮೂಲಕ ಭಕ್ತರು ಸಂಭ್ರಮಿಸಿದರು. ಬಂಡಿ ಎಳೆಯುತ್ತ ಸಾಗುವಾಗ ಭಕ್ತರಿಂದ ‘ಯೋ ಬಂಡಿ ಯೋ’ ಉದ್ಘೋಷ ಮುಗಿಲು ಮುಟ್ಟಿತ್ತು.
ಮಾಜಾಳಿ ಗ್ರಾಮದ ರಾಮನಾಥ ದೇವರ ಭಕ್ತ ಸಮೂಹ ಮಾಘ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸುತ್ತದೆ. ಮಾಜಾಳಿ, ಮುಡಗೇರಿ, ಅಂಗಡಿ, ದಾಂಡೇಬಾಗ, ಬಾವಳ ಸೇರಿದಂತೆ ಹಲವು ಗ್ರಾಮಗಳ ಜನರು ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ನೆಲೆಸಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ಮಾಜಾಳಿ ಗ್ರಾಮದ ದಾಡ್ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು. ಹರಕೆ ಹೊತ್ತ ಬಾಲಕರು, ಯುವಕರು ಹೊಟ್ಟೆಯ ಮೇಲ್ಭಾಗದ ಚರ್ಮಕ್ಕೆ ದಾರ ಚುಚ್ಚಿಸಿಕೊಂಡು ಹರಕೆ ಒಪ್ಪಿಸಿದರು. ಯುವತಿಯರು, ಮಹಿಳೆಯರು ತಲೆಯ ಮೇಲೆ ದೀವಜ್ (ದೀಪ) ಹೊತ್ತು ಬರಿಗಾಲಿನಲ್ಲಿ ಸಾಗಿದರು. ದಾಡ್ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ದೇವತಿ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ದಾರ, ದೀಪಗಳನ್ನು ಸಮರ್ಪಿಸಿದರು. ದಾಡ್ ದೇವಾಲಯದಿಂದ ದೇವತಿ ದೇವಾಲಯದ ಬಳಿಯ ಮೈದಾನದವರೆಗೆ ಕನಕಾಂಬರ ಅಲಂಕೃತ ಬಂಡಿ ಎಳೆಯಲಾಯಿತು.
ಭಕ್ತರು ದೇವರಿಗೆ ಹಣ್ಣುಕಾಯಿ ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಮನೆಗಳವರು ದೂರದ ಊರಿನಲ್ಲಿರುವ ಬಂಧುಗಳನ್ನು ಮನೆಗೆ ಆಹ್ವಾನಿಸಿದ್ದರು. ಜಾತ್ರೆ ಅಂಗವಾಗಿ ಈ ಭಾಗದ ಮನೆಗಳಲ್ಲಿ ಸಂಭ್ರಮ ಮನೆಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.