ADVERTISEMENT

ಕಾರವಾರ: ಜಿಲ್ಲೆಯಲ್ಲಿ ಮಲೇರಿಯಾ ಸೋಂಕು ಇಳಿಮುಖ

ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 13:57 IST
Last Updated 25 ಏಪ್ರಿಲ್ 2024, 13:57 IST
ಡಾ.ಕ್ಯಾಪ್ಟನ್ ರಮೇಶ ರಾವ್
ಡಾ.ಕ್ಯಾಪ್ಟನ್ ರಮೇಶ ರಾವ್   

ಕಾರವಾರ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, 2023‌ನೇ ಸಾಲಿನಲ್ಲಿ 16 ಪ್ರಕರಣ ಪತ್ತೆಯಾಗಿದ್ದವು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳೆಲ್ಲ ಹೊರರಾಜ್ಯಗಳಿಂದ ವಲಸೆ ಬಂದವರಲ್ಲಿ ಕಾಣಿಸಿಕೊಂಡಿದ್ದವು. ಪ್ರಸಕ್ತ ಸಾಲಿನಲ್ಲಿ ಒಂದು ಪ್ರಕರಣ ಮಾತ್ರ ವರದಿಯಾಗಿದೆ. ಉತ್ತರ ಭಾರತದ ರಾಜ್ಯಗಳಿಂದ ಮೀನುಗಾರಿಕೆ ಕೆಲಸಕ್ಕೆ, ನೌಕಾನೆಲೆ, ಅಣು ವಿದ್ಯುತ್ ಸ್ಥಾವರ ಕೆಲಸಕ್ಕೆ ವಲಸೆ ಬರುವ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅವರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅಗತ್ಯ ಎಚ್ಚರಿಕೆ ಕೈಗೊಳ್ಳಲಾಗುತ್ತಿದೆ’ ಎಂದರು.

‘ಪ್ರಸಕ್ತ ವರ್ಷ 82,938 ಜ್ವರ ಪೀಡಿತರ ರಕ್ತ ಪರೀಕ್ಷೆ ನಡೆಸಲಾಗಿದೆ. 2023-24ನೇ ಸಾಲಿನಲ್ಲಿ 1,089 ನೀರಿನ ಮೂಲಗಳಿಗೆ ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಗಪ್ಪಿ ಮೀನುಗಳನ್ನು ಬಿಡಲಾಗಿದೆ. ಅವು ಲಾರ್ವಾ ನಾಶಪಡಿಸಲಿದ್ದು, ಸೊಳ್ಳೆಗಳ ನಿಯಂತ್ರಣವಾಗಲಿದೆ. ಜಿಲ್ಲೆಯ 66 ಪ್ರಾಥಮಿಕ ಆರೊಗ್ಯ ಕೇಂದ್ರಗಳಲ್ಲಿ ಗಪ್ಪಿ ಮೀನು ಸಾಕಣೆಗೆ ತೊಟ್ಟಿ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ದೇಶದಲ್ಲಿ 2030ರ ವೇಳೆಗೆ ಮಲೇರಿಯಾ ಸೋಂಕು ನಿರ್ಮೂಲನೆಗೆ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಪ್ರಸಕ್ತ ಸಾಲಿನಲ್ಲಿ 33 ಡೆಂಗಿ ಪ್ರಕರಣವೂ ಪತ್ತೆಯಾಗಿದೆ. ಚಿಕುನ್ ಗುನ್ಯಾ, ಮೆದುಳು ಜ್ವರದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.

ಆರ್.ಸಿ.ಎಚ್ ಅಧಿಕಾರಿ ಡಾ.ನಟರಾಜ್, ‘ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮನೆ ಮನೆ ಭೇಟಿ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.