ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಭಾನುವಾರ ಬೆಳಗಿನ ಜಾವ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಸಾವಿಗೀಡಾದರೂ ಜನ ಬಂದಿಲ್ಲ. ತಾಲ್ಲೂಕು ಆಡಳಿತದವರೇ ಅಂತ್ಯಕ್ರಿಯೆ ಮಾಡಬೇಕು ಎಂದು ಮೃತನ ಕುಟುಂಬದವರು ಲಿಖಿತವಾಗಿ ಮನವಿ ಮಾಡಿದ್ದರಿಂದ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.
ಜುಲೈ 16ರಂದು ಕಾರವಾರಕ್ಕೆ ಬಂದಿದ್ದ ಮನೋಹರ (42) ಎಂಬ ವ್ಯಕ್ತಿಯು, ಅಲ್ಲಿನ ಫಿವರ್ ಕ್ಲಿನಿಕ್ನಲ್ಲಿ ತಪಾಸಣೆ ಮಾಡಿಸಿದ್ದರು.
ನಂತರ ಅದೇ ದಿನ ಪಟ್ಟಣದಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದರು. ಮಹಾರಾಷ್ಟ್ರದ ರತ್ನಗಿರಿಗೆ ಹೋಗಿ ಬಂದಿರುವ ಪ್ರಯಾಣ ಹಿನ್ನೆಲೆ ಇತ್ತು.
ಆದರೆ ಜು.18ರ ಮಧ್ಯರಾತ್ರಿ ಸಮಯದಲ್ಲಿ ಮನೆಯಲ್ಲಿ ಮಲಗಿದ್ದ ಮನೋಹರ ಏಕಾಏಕಿ ಮಂಚದಿಂದ ಕೆಳಗೆ ಬಿದ್ದಿದ್ದಾರೆ. ಮನೆಯಲ್ಲಿದ್ದ ಅತ್ತೆ, ಮಾವ ಹಾಗೂ ಪತ್ನಿ ಭಯದಿಂದ, ಸ್ಥಳೀಯರನ್ನು ಸಹಾಯಕ್ಕೆ ಕರೆಯಲು ಮುಂದಾದರೂ, ಮಧ್ಯರಾತ್ರಿ ಹಾಗೂ ಕೋವಿಡ್ ಭಯದಿಂದ ಜನರು ಮುಂದೆ ಬಂದಿಲ್ಲ. ತಹಶೀಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂಗನಬಸಯ್ಯ ಬೆಳಗಿನಜಾವವೇ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಆಗ ತಾಲ್ಲೂಕು ಆಸ್ಪತ್ರೆ ಸಿಬ್ಬಂದಿ ಬಂದು ತಪಾಸಣೆ ಮಾಡಿದಾಗ ಹೃದಯಾಘಾತದಿಂದ ಮನೋಹರ್ ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬದವರ ಮನವಿಯಂತೆ ಪಟ್ಟಣ ಪಂಚಾಯ್ತಿ ಸಿಬ್ಬಂದಿಯೇ ಪಿಪಿಇ ಕಿಟ್ ಧರಿಸಿ ಮೃತನ ಅಂತ್ಯಕ್ರಿಯೆ ಮಾಡಿದರು ಎಂದು
ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.