ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಪಕ್ಕದ ಚರಂಡಿಯ ಮೇಲೆ ಪಲ್ಟಿಯಾದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಅರಬೈಲು ಘಟ್ಟದ ಶಿರಲೆ ಫಾಲ್ಸ್ ಮತ್ತು ತಾಳಕುಂಬ್ರಿ ರಸ್ತೆ ನಡುವಿನ ತಿರುವಿನಲ್ಲಿ ನಡೆದಿದೆ.
ಭಟ್ಕಳ ತಾಲ್ಲೂಕಿನ ಶಿರಾಲಿ ತಟ್ಟೆಹಕ್ಲು ನಿವಾಸಿ ಸಂದೀಪ ತುಳಸಿ ದೇವಾಡಿಗ (37) ಮೃತರು. ಘಟನೆಯಲ್ಲಿ ಚಾಲಕ ಸೇರಿದಂತೆ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಉಳಿದ ಐವರಿಗೆ ಗಾಯಗಳಾಗಿವೆ.
ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳದ ವೆಂಕಟೇಶ ಮಂಜುನಾಥ ದೇವಾಡಿಗ, ಭರತ ನಾರಾಯಣ ದೇವಾಡಿಗ, ಅನಂತ ನಾಗಪ್ಪ ದೇವಾಡಿಗ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ನ ಈರಣ್ಣ ಮಲ್ಲಯ್ಯ ಕೊಣ್ಣೂರು ಹಾಗೂ ಚಾಲಕ ವಿಶ್ವನಾಥ ಸಂಗಪ್ಪ ವಡ್ಡಿಕಾರ ಗಾಯಗೊಂಡಿದ್ದಾರೆ. ಲಾರಿ ಚಾಲಕ ವಿಶ್ವನಾಥ ಸಂಗಪ್ಪಾ ಮಡ್ಡೀಕಾರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾರಿ ಇಳಕಲ್ನಿಂದ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡು ಭಟ್ಕಳಕಡೆಗೆ ಪ್ರಯಾಣಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಗುದ್ದಿ ಅಪಘಾತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.