ಭಟ್ಕಳ: ಶಾಸಕರಿದ್ದಾಗ ದಾನ ಧರ್ಮದ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಮಂಕಾಳ ವೈದ್ಯ ಅವರು ಸಚಿವರಾದ ಮೇಲೂ ಅದನ್ನು ಮುಂದುವರೆಸಿಕೊಂಡು ಹೋಗುವ ಭರವಸೆಯನ್ನು ಹಲವು ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
‘ತಾನು ಬಡವರ ಸಚಿವ ಎಂದು ಕರೆದುಕೊಂಡಿರುವ ಅವರು ತಮ್ಮ ಮಡದಿ ಪುಷ್ಪಲತಾ ಹಾಗೂ ಮಗಳು ಬೀನಾ ವೈದ್ಯ ಅವರಿಗೂ ಇದನ್ನೇ ಹೇಳಿರುವುದಾಗಿ ತಿಳಿಸಿದ್ದಾರೆ. ಇರುವಷ್ಟು ದಿವಸ ಬಡವರ ಶೋಷಿತ ವರ್ಗದವರ ಕಷ್ಟಕ್ಕೆ ಸ್ಪಂದಿಸುವುದಾಗಿ’ ತಿಳಿಸಿದ್ದಾರೆ.
ಪಕ್ಷಭೇದ ಮರೆತು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಮಾಡುವುದರ ಜೊತೆಗೆ ಮಂದಿರ, ಮಠ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದಾಗಿ ಹೇಳಿದ್ದಾರೆ. ಕ್ಷೇತ್ರದಲ್ಲಿ ತಾನು ಲಭ್ಯ ಇರದ ಸಮಯದಲ್ಲಿ ಜನರು ತನ್ನ ಮಡದಿ ಪುಷ್ಪಲತಾ ಹಾಗೂ ಮಗಳು ಬೀನಾ ವೈದ್ಯ ಅವರಲ್ಲಿ ಕಷ್ಟ ನಿವೇದಿಸಿಕೊಂಡರೆ ಅದಕ್ಕೆ ತಾನು ಸ್ಪಂದಿಸುವುದಾಗಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು ಹಾಗು ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಯೋಜನೆ ರೂಪಿಸಿರುವ ಅವರು ಭಟ್ಕಳದ ಚಿತ್ರಣವನ್ನು ಇನ್ನೊಮ್ಮೆ ಬದಲಾಯಿಸಲು ಸಂಕಲ್ಪ ತೊಟ್ಟಿದ್ದಾರೆ.
ಅಭಿವೃದ್ಧಿ ಹರಿಕಾರ ಮಂಕಾಳ ವೈದ್ಯ ಭಟ್ಕಳ: 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಮಂಕಾಳ ವೈದ್ಯ ಅವರು ಭಟ್ಕಳಕ್ಕೆ ₹ 1500 ಕೋಟಿ ಕಾಮಗಾರಿ ತಂದು ಇತಿಹಾಸ ಸೃಷ್ಟಿಸಿದ್ದರು. ಅವರ ಕಾಲದಲ್ಲಿಯೇ ಭಟ್ಕಳದಲ್ಲಿ ಮಿನಿವಿಧಾನಸೌಧ ಸುಸಜ್ಜಿತ ಬಸ್ ನಿಲ್ದಾಣ ಬಸ್ ಡಿಪೊ ಅತ್ಯಾಧುನಿಕ ಹಾಗೂ ಸುಸಜ್ಜಿತ ಕಿತ್ತೂರ ರಾಣಿ ಚನ್ನಮ್ಮಾ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನುದಾನ ತಂದಿದ್ದರು. ಹಲವು ಪ್ರಮುಖ ಸೇತುವೆ ರಸ್ತೆಗಳು ಅವರ ಕಾಲದಲ್ಲಿ ನಿರ್ಮಾಣವಾಗಿತ್ತು. ಈಗ ಮೀನುಗಾರಿಕೆ ಸಚಿವರಾಗಿ ಅಧಿಕಾರಿದಲ್ಲಿದ್ದು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.