ಅಂಕೋಲಾ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊನ್ನಳ್ಳಿ ಬಳಿ ಭಾನುವಾರ ಮುಂಜಾನೆ ಕಂಟೈನರ್ ಲಾರಿ ಮತ್ತು ಒಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಮ್ನಿಯಲ್ಲಿದ್ದ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಹನಾ ಮಂಜುನಾಥ ಶಾನಭಾಗ (42) ಮೃತರು. ಸಹನಾ ಅವರ ಪತಿ ಮಂಜುನಾಥ ಶಾನಭಾಗ, ಪುತ್ರಿಯರಾದ ಸಾಕ್ಷಿ ಶಾನಭಾಗ, ಪ್ರೇಕ್ಷಾ ಶಾನಭಾಗ ಮತ್ತು ಸೋದರ ಸಂಬಂಧಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಂಜುನಾಥ ಶಾನಭಾಗ ಯಲ್ಲಾಪುರದ ಶಾನಭಾಗ ಹೋಟೆಲ್ ಮಾಲೀಕರಾಗಿದ್ದು, ಹೋಟೆಲ್ ಅಚ್ಚುತ್ ಎಂದು ಪರಿಚಿತರಾಗಿದ್ದರು. ಮಾದನಗೇರಿಯಲ್ಲಿ ಭಾನುವಾರ ನಡೆಯಲಿರುವ ಸಂಬಂಧಿಕರ ಮದುವೆಗೆಂದು ಯಲ್ಲಾಪುರದಿಂದ ಮಂಜುನಾಥ ಶಾನಭಾಗ ಮತ್ತು ಕುಟುಂಬದವರು ಮುಂಜಾನೆಯೇ ಹೊರಟಿದ್ದರು.
ಲಾರಿ ಮಂಗಳೂರಿನಿಂದ ಜಮಖಂಡಿಗೆ ಸಾಗುತ್ತಿತ್ತು. ಇಲ್ಲಿನ ಹೊನ್ನಳ್ಳಿ ಶಾಲೆಯ ಬಳಿ ಅಂಕೋಲಾ ಯಲ್ಲಾಪುರ ಮಾರ್ಗವಾಗಿ ಚಲಿಸುತ್ತಿರುವ ಲಾರಿಗೆ ಒಮ್ನಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಒಮ್ನಿ ನಜ್ಜುಗುಜ್ಜಾಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಸಹನಾ ಸ್ಥಳದಲ್ಲಿಯೇ ಮೃತಪಟ್ಟರು. ವಾಹನ ಚಲಾಯಿಸುತ್ತಿದ್ದ ಮಂಜುನಾಥ ಅವರು ಅಪಘಾತದಲ್ಲಿ ವಾಹನದ ಅಡಿಯಲ್ಲಿ ಸಿಲುಕಿದ್ದರಿಂದ ಎರಡು ಕಾಲುಗಳು ತುಂಡಾಗಿವೆ. ಸತತ ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಅವರನ್ನು ಹೊರಕ್ಕೆ ತರಲಾಯಿತು.
ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಉಡುಪಿ ಮೂಲದ ವ್ಯಕ್ತಿಯೊಬ್ಬರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವು ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಕಳುಹಿಸಲಾಗಿದೆ. ಸಿಪಿಐ ಸಂತೋಷ ಶೆಟ್ಟಿ, ಪಿಎಸ್ಐ ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.