
ಮುಂಡಗೋಡ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ವಾಗತ ಕೋರುವ ಬ್ಯಾನರ್ಗಳನ್ನು ಅಳವಡಿಸುತ್ತಿರುವ ಜನರು ಒಂದೆಡೆ, ಪ್ರಮುಖ ರಸ್ತೆಗಳ ಎಡಬಲ ಬದಿಯಲ್ಲಿ ಅಲಂಕೃತ ಬೀದಿ ದೀಪಗಳು ದುರಸ್ತಿಯಾಗದಿದ್ದರೂ, ಜಾತ್ರೆಗೆ ಬರುವ ಜನರಿಗೆ ಕತ್ತಲಾಗದಿರಲಿ ಎಂದು, ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಹಳೂರಿನ ಚೌತಮನೆ ವರೆಗೆ ರಸ್ತೆಯ ಎರಡೂ ಬದಿಗೆ, ಭಕ್ತರೇ ಅಲಂಕೃತ ದೀಪಗಳ ಸರಮಾಲೆ ಹಾಕಿರುವುದು ಮತ್ತೊಂದೆಡೆ.
ಪಟ್ಟಣದ ಮಾರಿಕಾಂಬಾ ದೇವಿಯ ಏಳನೇ ಜಾತ್ರಾ ಮಹೋತ್ಸವ ಫೆ.3ರಿಂದ ಆರಂಭವಾಗಲಿದ್ದು, ಫೆ.11ರಂದು ಮುಕ್ತಾಯವಾಗಲಿದೆ. ಫೆ.4ರಂದು ಬೆಳಿಗ್ಗೆ 8.51ಕ್ಕೆ ರಥೋತ್ಸವ ಜರುಗಲಿದೆ. ಜಾತ್ರೆಯ ಅಂಗವಾಗಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಅಲಂಕಾರ, ಕೇಸರಿ ಬಂಟಿಂಗ್ಸ್ಗಳಿಂದ ಸಿಂಗಾರ ಕಾರ್ಯ ನಡೆಯುತ್ತಿದೆ. ದೇವಿ ಪ್ರತಿಷ್ಠಾಪನೆಯಾಗುವ ಚೌತಮನೆಯಲ್ಲಿ ಭವ್ಯವಾದ ಜಾತ್ರಾ ಗದ್ದುಗೆಯನ್ನು ನಿರ್ಮಿಸಲಾಗಿದೆ.
ದೇವಿ ಗದ್ದುಗೆಯ ಬಲಭಾಗದಲ್ಲಿ, ಈಗಾಗಲೇ ಜಾಯಿಂಟ್ ವ್ಹೀಲ್ ಸೇರಿದಂತೆ ಇನ್ನಿತರ ಮನರಂಜನಾ ಪರಿಕರಗಳನ್ನು ಕ್ರೇನ್ಗಳನ್ನು ಬಳಸಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಜಾತ್ರಾ ಮಳಿಗೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದು, ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.
‘ಈ ಸಲವಾದರೂ, ಪಾರ್ಕಿಂಗ್ಗೆ ನಿಗದಿಪಡಿಸಿದ ಜಾಗದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡುವುದು ಹಾಗೂ ಹಿರಿಯ ನಾಗರಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕುʼ ಎಂದು ಸ್ಥಳೀಯ ನಿವಾಸಿ ಪರುಶುರಾಮ ಆಗ್ರಹಿಸಿದರು.
ʼಜಾಯಿಂಟ್ ವ್ಹೀಲ್ ಸೇರಿದಂತೆ ಟೊರಾ ಟೊರಾ ಇನ್ನಿತರ ಪರಿಕರಗಳ ನಿರ್ವಹಣೆ ಮಾಡುವರು ಮುಂದಿನ ಅಪಾಯವನ್ನು ಅರಿಯದೇ, ಜೋರಾಗಿ ತಿರುಗಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಯವರು ಕಡಿವಾಣ ಹಾಕಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಹೇಳಿದರು.
ನಿರ್ಬಂಧಿಸಲಿ: ‘ಜಾತ್ರೆಗಳು ಭಕ್ತಿ ಹಾಗೂ ಮನರಂಜನೆಯ ಕೇಂದ್ರಗಳಾಗಿ ಸದುಪಯೋಗವಾಗಬೇಕು. ಜನರು ಹಣ ಕಳೆದುಕೊಂಡು, ಮತ್ತಷ್ಟು ಆರ್ಥಿಕ ನಷ್ಟ ಅನುಭವಿಸುವಂತಾಗಬಾರದುʼ ಎಂದು ಹಿಂದು ಜಾಗರಣ ವೇದಿಕೆಯ ಸಂಚಾಲಕ ಪ್ರಕಾಶ ಬಡಿಗೇರ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.