ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಯ ನಾಲ್ಕನೇ ದಿನವೂ ಜನದಟ್ಟಣಿ ಮುಂದುವರಿದಿದೆ. ಶನಿವಾರ ಸಹಸ್ರಾರು ಭಕ್ತರು, ಅನೇಕ ಗಣ್ಯರು ಬಿಡಕಿಬೈಲಿನ ಜಾತ್ರಾ ಚಪ್ಪರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿರಸಿ ಸುತ್ತಮುತ್ತಲಿನ ಹಳ್ಳಿಗಳ ಯುವಜನರು, ಎರಡು ದಿನಗಳ ರಜೆ ಕಳೆಯಲು ಊರಿಗೆ ಬಂದಿದ್ದಾರೆ. ಬೆಂಗಳೂರಿನಿಂದ ಶಿರಸಿಗೆ ವಿಶೇಷ ಬಸ್ಗಳು ಬರುತ್ತಿವೆ. ಭಾನುವಾರ ಜಾತ್ರೆ ಪೇಟೆಯಲ್ಲಿ ಜನಸಂದಣಿ ಹೆಚ್ಚುವ ಸಾಧ್ಯತೆಯಿದೆ.
ಶನಿವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ದಂಪತಿ, ಸಂಸದ ಅನಂತಕುಮಾರ ಹೆಗಡೆ ದಂಪತಿ, ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್, ಶಾಸಕ ಮಂಕಾಳ ವೈದ್ಯ ಅವರು ಮಾರಿಕಾಂಬಾ ದೇವಿಯ ದರ್ಶನ ಪಡೆದರು.
ಶುಕ್ರವಾರ ರಾತ್ರಿ 2 ಗಂಟೆಯವರೆಗೂ ಜಾತ್ರೆ ಪೇಟೆಯಲ್ಲಿ ಜನಸಾಗರವೇ ತುಂಬಿತ್ತು. ಮನರಂಜನಾ ಆಟಿಕೆಗಳು, ತಿಂಡಿ–ತಿನಿಸುಗಳು, ಐಸ್ಕ್ರೀಮ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಉಳಿದ ಅಂಗಡಿಕಾರರ ವ್ಯಾಪಾರ ಮಂದಗತಿಯಲ್ಲಿ ನಡೆಯಿತು. ಶಿರಸಿ ಜಾತ್ರೆಗೆ ಹಚ್ಚೆ ಹಾಕುವವರು ಅನೇಕರು ಬರುತ್ತಾರೆ. ಈ ಬಾರಿ ಕೋವಿಡ್ 19 ಭೀತಿಯಲ್ಲಿ ಹಚ್ಚೆಗೆ ವಿಶೇಷ ಬೇಡಿಕೆ ಇರಲಿಲ್ಲ. ಜಾತ್ರೆ ಪೇಟೆಯಲ್ಲಿ ಅನೇಕರು ಮುಖ ಗವಸು ಹಾಕಿಕೊಂಡು ಓಡಾಡುವ ದೃಶ್ಯ ಕಂಡುಬಂತು.
ಕೋಟೆಕೆರೆಯೆದುರಿನ ಆವರಣ ನಿತ್ಯಸಂಜೆ ಮಿನಿ ಜಾತ್ರೆಯಂತೆ ಕಾಣುತ್ತದೆ. ಮನರಂಜನಾ ಆಟಿಕೆಗಳು, ಸೌಂದರ್ಯ ಸಾಮಗ್ರಿಗಳು, ಬಟ್ಟೆ ಅಂಗಡಿಗಳು ಇಲ್ಲಿ ತಲೆಎತ್ತಿವೆ. ಸರ್ಕಸ್, ಪ್ರಾಣಿಗಳ ಪ್ರದರ್ಶನವೂ ಇಲ್ಲಿದೆ. ಅಕ್ಷಯ ಮಾಶಲ್ಕರ್, ರಾಜು ಹೆಗಡೆ ತಂಡ ಸೇರಿ ಪೊಪೆಟ್ ಶೋ ಹಮ್ಮಿಕೊಂಡಿದೆ. ಜಾತ್ರೆ ಪೇಟೆಯಂತೆ ಇಲ್ಲೂ ಕೂಡ ತೀವ್ರ ಜನದಟ್ಟಣಿಯಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.