
ಶಿರಸಿ: ದ್ವೈವಾರ್ಷಿಕವಾಗಿ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಫೆ.24ರಿಂದ ಮಾ.4ರವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಬರುವ ಜಾತ್ರೆಗೆ, ಸಿದ್ಧತೆ ಹಾಗೂ ಯಶಸ್ಸಿಗೆ ದೇವಾಲಯದ ವತಿಯಿಂದ ವಿವಿಧ ಇಲಾಖೆಗಳು, ಸಾರ್ವಜನಿಕರ ಸಹಕಾರ ಕೋರಲಾಯಿತು.
ಭಾನುವಾರ ದೇವಾಲಯದ ಸಭಾಮಂಟಪದಲ್ಲಿ ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ದೇವಿ ಸಾನ್ನಿಧ್ಯದಲ್ಲಿ ದೀಪ ಬೆಳಗಿಸಲಾಯಿತು. ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.
ನಂತರ ನಡೆದ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಯಲ್ಲಿ ಸ್ವಚ್ಛತೆ, ನೀರು, ಸಾರಿಗೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಬೇಕಿದೆ. ಜಾತ್ರೆ ಸಮಯದಲ್ಲಿ ಬೇಡಿಕೆ ಅನುಗುಣ ಬಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗುವುದು. ಸ್ಥಳೀಯರು ಸಹಕಾರ ನೀಡಿದರೆ ದೇವಾಲಯದ ರಥಬೀದಿ ವಿಸ್ತರಣೆ ಮಾಡಲಾಗುವುದು. ರಥೋತ್ಸವದ ವೇಳೆ ವಿದ್ಯುತ್ ಲೈನ್ಗಳಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ನೆಲದಲ್ಲಿ ವಿದ್ಯುತ್ ಲೈನ್ ಅಳವಡಿಸುವ ಯೋಜನೆಗೆ ₹3 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಟೆಂಡರ್ ಆಗಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕೆ.ಕಾವ್ಯರಾಣಿ ಮಾತನಾಡಿ, ‘ನೀರು, ಸ್ವಚ್ಛತೆ ಕುರಿತು ಜವಾಬ್ದಾರಿಯಿಂದ ಆದ್ಯತೆ ಮೇರೆಗೆ ನಗರಸಭೆ ನಿರ್ವಹಣೆ ಮಾಡಬೇಕಿದೆ. ರಸ್ತೆ ದುರಸ್ತಿ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಾಗಿದೆ. ತಾತ್ಕಾಲಿಕ ಹಾಗೂ ಸಂಚಾರಿ ಶೌಚಾಲಯ ವ್ಯವಸ್ಥೆ ಅತ್ಯವಶ್ಯವಾಗಿದೆ. ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುವುದು. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವ ಜತೆ ಮಾಹಿತಿಗಾಗಿ ನಾಮಫಲಕ ಅಳವಡಿಸಲಾಗುವುದು. 200 ಬಸ್ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ರಾಮು ಕಿಣಿ ಮಾತನಾಡಿ, ‘ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೀಗಾಗಿ 100 ರಿಂದ 150 ಶೌಚಾಲಯ ಸ್ಥಾಪಿಸಬೇಕಿದೆ. ಗದ್ದುಗೆ ಸುತ್ತಲು ಕಸದ ತೊಟ್ಟಿ ಇಡುವುದು ಅವಶ್ಯ’ ಎಂದರು.
ಸಾಮಾಜಿಕ ಕಾರ್ಯಕರ್ತ ವಿನಯ ಹೆಗಡೆ ಪಡಿಗೇರಿ ಮಾತನಾಡಿ, ‘ಕೋವಿಡ್ ಸಮಯದಲ್ಲಿ ಹಳ್ಳಿಗಳ ಬಸ್ ಬಂದ್ ಮಾಡಲಾಗಿದ್ದು, ಅದನ್ನು ಜಾತ್ರೆ ಸಮಯದಲ್ಲಿಯಾದರೂ ಪುನರಾರಂಭಿಸಬೇಕು’ ಎಂದು ಸಲಹೆ ನೀಡಿದರು.
ಶಿರಸಿ-ಕುಮಟಾ ರಸ್ತೆ ಜಾತ್ರೆಯ ಮುನ್ನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಆಗ್ರಹ ಕೇಳಿ ಬಂತು.
ಪೌರಾಯುಕ್ತ ಪ್ರಕಾಶ ಚೆನ್ನಪ್ಪನವರ್, ಹೆಸ್ಕಾಂ ಎಇಇ ನಾಗರಾಜ ಪಾಟೀಲ, ನಿವೃತ್ತ ಪಿಎಸ್ಐ ರಘು ಕಾನಡೆ, ಮಂಜುನಾಥ ಪೂಜಾರಿ, ನಿವೃತ್ತ ಆರ್ಟಿಒ ಜಿ.ಎಸ್.ಹೆಗಡೆ ಹಲ್ಲುಸರಿಗೆ, ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ ಇತರರು ಮಾತನಾಡಿದರು. ದೇವಾಲಯದ ಅಧ್ಯಕ್ಷ ರವೀಂದ್ರ ಜಿ. ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಶಿವಾನಂದ ಶೆಟ್ಟಿ, ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ ಇತರರಿದ್ದರು.
ಕಳೆದ ಜಾತ್ರೆಗಿಂತ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಜಾತ್ರೆ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕುರವೀಂದ್ರ ಜಿ.ನಾಯ್ಕ ದೇವಾಲಯದ ಅಧ್ಯಕ್ಷ
ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿವಿಧಾನಗಳು ಜ.7ರಿಂದ ಪ್ರಾರಂಭವಾಗಲಿದೆ. ಜ.7ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು ಫೆ.3ರಂದು ಪೂರ್ವದಿಕ್ಕಿಗೆ ಮೊದಲ ಹೊರಬಿಡು ಫೆ.6ರಂದು ಉತ್ತರ ದಿಕ್ಕಿಗೆ 2ನೇ ಹೊರಬಿಡು
ಫೆ.10ರಂದು ಪೂರ್ವ ದಿಕ್ಕಿಗೆ 3ನೇ ಹೊರಬಿಡು
ಫೆ.13ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು
ಫೆ.13ರಂದು ಉತ್ತರ ದಿಕ್ಕಿಗೆ 4ನೇ ಹೊರಬಿಡು
ಫೆ.17ರಂದು ರಥದ ಮರ ತರುವುದು ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬಿಡು ನಡೆಯಲಿದೆ.
ಫೆ.18ರಂದು ಅಂಕೆ ಹಾಕುವುದು ದೇವಿಯ ವಿಸರ್ಜನೆ ನಡೆಯಲಿದೆ.
ಫೆ.24ರಂದು ಮಧ್ಯಾಹ್ನ 12.30ರಿಂದ 1.08 ಗಂಟೆಯೊಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ಸಭಾ ಮಂಟಪದಲ್ಲಿ ರಾತ್ರಿ 11.36ರಿಂದ 11.43 ಗಂಟೆಯೊಳಗೆ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ.
ಫೆ.25ರಂದು ಬೆಳಿಗ್ಗೆ 7.27 ರಿಂದ 7.45 ಗಂಟೆಯೊಳಗೆ ದೇವಿಯ ರಥಾರೋಹಣ ಕಾರ್ಯ ನಡೆಯಲಿದ್ದು ನಂತರ 9.07ರ ನಂತರ ದೇವಿಯ ಶೋಭಾ ಯಾತ್ರೆ ನಂತರ ಗದ್ದುಗೆಯ ಮೇಲೆ ಸ್ಥಾಪನೆ ಕಾರ್ಯ ನಡೆಯುವುದು. ಫೆ.26ರಿಂದ ಭಕ್ತರ ಸೇವೆಗೆ ಅವಕಾಶವಿದೆ.
ಮಾ.4ರಂದು ಬೆಳಿಗ್ಗೆ 10.47 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಮಾ.19ರ ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.