ಅಂಕೋಲಾ: ತಾಲ್ಲೂಕಿನ ಅಂಗಡಿಬೈಲ್ ಗ್ರಾಮವು ಗುರುವಾರ, ಕುವೆಂಪು ಪರಿಕಲ್ಪನೆಯ ‘ಮಂತ್ರ ಮಾಂಗಲ್ಯ’ ಸರಳ ವಿವಾಹಕ್ಕೆ ಸಾಕ್ಷಿಯಾಯಿತು.
ಜಾನಪದ ವಿದ್ವಾಂಸ ಡಾ.ಆರ್.ಎನ್.ನಾಯಕ ಅವರ ಮೊಮ್ಮಗ ಆತ್ಮೀಯ ಹಾಗೂ ಮಾಧವಿ ಅವರ ಮದುವೆ ಸರಳವಾಗಿ ನೆರವೇರಿತು. ಮಾವಿನ ಮರದ ಕೆಳಗೆ, ಕುಟುಂಬ ವರ್ಗದವರೇ ಮದುವೆಯ ವೇದಿಕೆ ನಿರ್ಮಾಣ ಮಾಡಿದ್ದರು.
ಪರಿಸರಕ್ಕೆ ಪೂರಕ ಎನ್ನುವಂತೆ ವಧು ವರರು ಇಪ್ಳಿ ಹೂವಿನ ಮಾಲೆಯನ್ನು ಪರಸ್ಪರ ಬದಲಾಯಿಸಿಕೊಂಡರು. ವಿವಾಹ ಸಂಹಿತೆಗೆ ಹಿರಿಯರ ಮುಂದೆ ಒಪ್ಪಿಗೆ ಸೂಚಿಸಿದರು. ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ಕವಯತ್ರಿ ಅಕ್ಷತಾ ಕೃಷ್ಣಮೂರ್ತಿ, ಮರಾಠಿ ಭಾಷೆಯಲ್ಲಿ ನಟಿ ಅಕ್ಷತಾ ರಾವ್, ಇಂಗ್ಲಿಷ್ನಲ್ಲಿ ನಿರ್ದೇಶಕಿ ಶರಣ್ಯಾ ಅವರು ಓದಿದರು.
ಮದುವೆ ಮಂಟಪ, ಅಲಂಕಾರ ಸೇರಿದಂತೆ ಪ್ರಾಕೃತಿಕ ಪಾರಂಪರಿಕ ವಸ್ತುಗಳನ್ನು ಬಳಕೆ ಮಾಡಲಾಗಿತ್ತು. ಅಂಕೋಲಾದ ಹುರಿ ಅಕ್ಕಿ ಉಂಡೆ, ಕಬ್ಬಿನ ಹಾಲು ಸೇರಿದಂತೆ ದೇಸಿ ಅಡುಗೆ, ಯಕ್ಷಗಾನ, ಕೊಳಲು ವಾದನ ಮದುವೆಯ ಮೆರಗು ಹೆಚ್ಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.