ಯಲ್ಲಾಪುರ: ಆರೋಗ್ಯ ವೃದ್ಧಿ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ‘ಆಯುಷ್ಮಾನ ಭಾರತ’ ಯೋಜನೆಯ ಪ್ರಯೋಜನ ಎಲ್ಲ ಅರ್ಹರಿಗೆ ದೊರೆಯುವಂತಾಗಬೇಕು. ಅಭಿವೃದ್ಧಿಯಲ್ಲಿ ಪಕ್ಷ ಭೇದ ಇರಬಾರದು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಆನಗೋಡ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ತಾಲ್ಲೂಕಿನ ಆನಗೋಡದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 83 ಫಲಾನುಭವಿಗಳಿಗೆ ಉಜ್ವಲ ಅಡುಗೆ ಗ್ಯಾಸ್ ವಿತರಿಸಿ, ₹ 24 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಾಜೀವಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ, ಅವರು ಮಾತನಾಡಿದರು.
ಆರೋಗ್ಯ ಸುಧಾರಣೆ ಮತ್ತು ಅರಣ್ಯ ನಾಶ ತಪ್ಪಿಸುವ ಉದ್ದೇಶದಿಂದ ಪ್ರತಿಯೊಬ್ಬರಿಗೂ ಅಡುಗೆ ಅನಿಲ ವಿತರಿಸುವ ಯೋಜನೆ ರೂಪಿಸಲಾಗಿದೆ. 10 ಕೋಟಿ ಮನೆಗಳಿಗೆ ಗ್ಯಾಸ್ ವಿತರಣೆಯ ಯೋಜನೆಯಿಂದ ಸರ್ಕಾರಕ್ಕೆ ಪ್ರತಿವರ್ಷ ಸುಮಾರು ₹ 30ಸಾವಿರ ಕೋಟಿ ಉಳಿತಾಯವಾಗುತ್ತಿದೆ. ಕೇಂದ್ರ ಸರ್ಕಾರ ರೂಪಿಸಿದ 12 ಕೋಟಿ ಶೌಚಾಲಯದಿಂದ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲ ಆಗಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ಸದಸ್ಯರಾದ ಲಕ್ಷ್ಮೀನಾರಾಯಣ ಗುಮ್ಮಾನಿ, ನಟರಾಜ ಗೌಡರ್, ಚಂದ್ರಕಲಾ ಭಟ್ಟ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರುತಿ ಹೆಗಡೆ, ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಾ ಗೌಡ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಠ್ಠಲ ನಾಟೇಕರ, ಹಿರಿಯ ಧುರೀಣ ಪ್ರಮೋದ ಹೆಗಡೆ, ಗಣಪತಿ ಮುದ್ದೇಪಾಲ, ಶಮಾ ಭಾರತ್ ಗ್ಯಾಸ್ ಮಾಲೀಕ ಎ.ಎ.ಶೇಖ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.