ಶಿರಸಿ: ಪ್ರಚಾರಕ್ಕೆ ಯಾತ್ರೆ ಮಾಡುವ ಬದಲು ಜನರು ಎದುರಿಸುತ್ತಿರುವ ಇ–ಸ್ವತ್ತು ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಂದಾಗಿದ್ದರೆ ಜನರೇ ಆಶೀರ್ವದಿಸುತ್ತಿದ್ದರು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಪ್ರದೀಪ ಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಕ್ರಮ–ಸಕ್ರಮ ಜಾರಿಗೆ ತಂದು ಜಮೀನು ನೋಂದಣಿ ಸರಳೀಕರಿಸಲು ಅಧಿಸೂಚನೆ ಪ್ರಕಟಿಸಲು ಮುಂದಾಗಿತ್ತು. ಈ ವೇಳೆ ರಾಜೀವ್ ಚಂದ್ರಶೇಖರ್ ಅವರೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಈಗ ಲಕ್ಷಾಂತರ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಶಿರಸಿ ನಗರವೊಂದರಲ್ಲೇ ಏಳು ಸಾವಿರಕ್ಕೂ ಹೆಚ್ಚು ಪ್ರಕರಣ ಇ–ಸ್ವತ್ತು, ನಮೂನೆ–3ರ ಕಾರಣಕ್ಕೆ ಬಾಕಿ ಉಳಿದುಕೊಂಡಿದೆ. ಮನೆ ನಿರ್ಮಾಣ, ಆಸ್ತಿ ಪರಭಾರೆ, ಸಾಲ ಪಡೆಯಲು ಸಾಧ್ಯವಾಗದೆ ಜನರು ಪರಿತಪಿಸುತ್ತಿದ್ದಾರೆ. ಜನರ ಕಷ್ಟ ಬಿಜೆಪಿ ನಾಯಕರಿಗೆ ಅರ್ಥವಾಗುತ್ತಿಲ್ಲವೆ?’ ಎಂದು ಪ್ರಶ್ನಿಸಿದರು.
‘ಜನಾಶೀರ್ವಾದ ಯಾತ್ರೆಗೆ ತೋರಿದ ಉತ್ಸಾಹವನ್ನು ಬಿಜೆಪಿಯವರು ಕೇಂದ್ರ ಸಚಿವರಿಗೆ ತಿಳಿಹೇಳಿ ನ್ಯಾಯಾಲಯದಲ್ಲಿ ದಾಖಲಿಸಿದ್ದ ಮೊಕದ್ದಮೆ ಹಿಂಪಡೆಯಲು ತೋರಿಸಲಿ’ ಎಂದು ಸವಾಲು ಹಾಕಿದರು.
ಶ್ರೀಕಾಂತ ತಾರಿಬಾಗಿಲ ಮಾತನಾಡಿ, ‘ಇ–ಸ್ವತ್ತು ಭೂಮಿ ಹಕ್ಕನ್ನೆ ಕಸಿಯುತ್ತಿದೆ. ಪರಿಹಾರ ಕಾಣುವುದು ಯಾವಾಗ ಎಂಬುದನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಲಿ’ ಎಂದರು. ದಯಾನಂದ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.