ಕಾರವಾರ: ‘ದಸರಾದಂಥ ರಜಾ ದಿನಗಳಲ್ಲಿ ಶಾಲೆಗಳಲ್ಲಿ ಸಾಮಾನ್ಯವಾಗಿ ಎನ್.ಎಸ್.ಎಸ್ ಶಿಬಿರವೂ ಸೇರಿದಂತೆ ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆಯುತ್ತವೆ. ಶಿರಸಿಯ ಕಲ್ಲಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲೂ ಇದನ್ನು ಹೊರತು ಪಡಿಸಿ ಮತ್ತೇನೂ ಆಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದಕ್ಕೆ ವಿರೋಧ ಯಾಕೆ ವ್ಯಕ್ತವಾಯಿತು ಎಂದು ಗೊತ್ತಿಲ್ಲ. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳು, 830 ಕ್ರೈಸ್ ಶಾಲೆಗಳು ಮತ್ತು ಬೇರೆ ಬೇರೆ ವಸತಿ ನಿಲಯಗಳಿಗೆ ಈಗ ರಜೆಯಿದೆ. ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಸೇವೆ ಯೋಜನೆಯ ಕಾರ್ಯಕ್ರಮ, ದೇಶಭಕ್ತಿಗೀತೆ, ವಂದೇ ಮಾತರಂ, ಸಂಗೀತ ಪಾಠ ಅಥವಾ ದೇಶ ಮೊದಲು ಎಂದು ಹೇಳುವ ಯಾವುದೇ ಕಾರ್ಯಕ್ರಮ ಮಾಡುತ್ತಿದ್ದರೂ ಅನುಮತಿ ಕೊಡುವ ಪರಿಪಾಠವಿದೆ. ಆದರೆ, ನಿಷೇಧಿತ ಸಂಸ್ಥೆಗಳು ಮತ್ತು ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ’ ಎಂದರು.
‘ಕೆಲವು ಸಂದರ್ಭದಲ್ಲಿ ಕೆಲವರು ಗೊತ್ತಿಲ್ಲದೇ ವಿರೋಧ ಮಾಡಿರ್ತಾರೆ. ಕಲ್ಲಿ ಮೊರಾರ್ಜಿ ಶಾಲೆಯಲ್ಲಿ ಆರೆಸ್ಸೆಸ್ಗೆ ಎಂದು ಕೊಟ್ಟ ನೆನಪಿಲ್ಲ. ಅದಕ್ಕೆ ಕೊಡಬೇಕೇ ಬೇಡವೇ ಎಂದು ಬೇರೆ ಯೋಚನೆ ಮಾಡೋಣ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.