ಅಂಕೋಲಾ: ಇಲ್ಲಿನ ಬೆಳಂಬಾರದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ತಡೆಗೋಡೆ, ಬಂದರು ಅಭಿವೃದ್ಧಿ, ನಾಡದೋಣಿ ತಂಗುದಾಣ ಸೇರಿದಂತೆ ಈಗಾಗಲೇ ಯೋಜನೆ ರೂಪಿಸಿದ ಹಲವು ಕಾಮಗಾರಿಗಳಿಗೆ ₹ 146 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ರೂಪಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಂತಿಮ ರೂಪುರೇಷೆ ದೊರೆಯಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್ ಅಂಗಾರ ಹೇಳಿದರು.
ಸೋಮವಾರ ತಾಲ್ಲೂಕಿನ ಬೆಳಂಬಾರ ಮತ್ತು ಬೇಲೆಕೇರಿ ಬಂದರು ಪ್ರದೇಶಗಳಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೇಲೆಕೇರಿ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕೆ ಪುಣೆಯ ಮೂಲದ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ತಯಾರಿಸಲಿದೆ. ತಡೆಗೋಡೆ ಕಾಮಗಾರಿಗೆ ಅಂದಾಜು ₹ 20 ಕೋಟಿ ಅನುದಾನ ಬೇಕಾಗಲಿದೆ. ಶೀಘ್ರದಲ್ಲಿಯೇ ಅನುದಾನ ಮಂಜೂರಾದಲ್ಲಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.
ಬೇಲೇಕೇರಿ ಬಂದರಿನಲ್ಲಿ ಅವಶ್ಯಕ ಮೂಲ ಸೌಕರ್ಯಕ್ಕೆ ಅನುದಾನದ ಅವಶ್ಯಕತೆ ಇದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ ಬಂದರು ಪ್ರದೇಶಗಳ ಮೀನುಗಾರರ ಸಮಸ್ಯೆಗಳನ್ನು ಸಚಿವರಿಗೆ ತಿಳಿಸಿದರು. ತಹಶೀಲ್ದಾರ್ ಉದಯ ಕುಂಬಾರ, ಬಂದರು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಕುಮಾರ ಹೆಡೆ, ಮೀನುಗಾರಿಕಾ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಜಗದೀಶ ಖಾರ್ವಿ, ರಾಮದಾಸ ಖಾರ್ವಿ, ಗೌರೀಶ ಖಾರ್ವಿ, ರಾಜು ಖಾರ್ವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.