ಪ್ರಜಾವಾಣಿ ವಾರ್ತೆ
ಕಾರವಾರ: ‘ವಿದ್ಯುತ್ ವ್ಯತ್ಯಯದ ಸಮಸ್ಯೆ ಕುರಿತು ಜನರ ದೂರು ಸ್ವೀಕರಿಸಲು ಸಹಾಯವಾಣಿ ಆರಂಭಿಸಿ, ಜನರ ಕರೆಗಳನ್ನು ತಪ್ಪದೇ ಸ್ವೀಕರಿಸಬೇಕು’ ಎಂದು ಶಾಸಕ ಸತೀಶ ಸೈಲ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ಅವರು ಜನರಿಂದ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತ ದೂರು ಆಲಿಸಿ, ಸಮಸ್ಯೆ ಪರಿಹಾರಕ್ಕೆ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ತಿಳಿಸಿದರು.
‘ಗ್ರಾಮೀಣ ಭಾಗದಲ್ಲಿ ಪಿಎಂಜಿಎಸ್ವೈ ಅಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಬಾರದು. ವಿದ್ಯುತ್ ವ್ಯತ್ಯಯ ತಡೆಗೆ ವಿದ್ಯುತ್ ತಂತಿಗಳ ಪಕ್ಕದಲ್ಲಿರುವ ಮರಗಳ ಟೊಂಗೆ ಕತ್ತರಿಸಲು ಸಹಕಾರ ನೀಡಬೇಕು. ಶಾಲೆ, ಅಂಗನವಾಡಿಗಳ ಪಕ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ತುರ್ತು ಕ್ರಮವಾಗಬೇಕು’ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
‘ಮಳೆಗಾಲದಲ್ಲಿ ಡೆಂಗಿ, ಮಲೇರಿಯಾ, ಇತರ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಕ್ರಮವಾಗಬೇಕು. ಗ್ರಾಮಗಳಿಗೆ ಬಸ್ ಸೌಕರ್ಯದ ಸಮಸ್ಯೆಯಿದ್ದರೆ ಪಂಚಾಯತಗಳಲ್ಲಿ ಠರಾವು ಮಾಡಿ ಸಾರಿಗೆ ಇಲಾಖೆಗೆ ಅಧಿಕಾರಿಗಳಿಗೆ ಪಿಡಿಒಗಳು ಪತ್ರ ಬರೆಯಬೇಕು’ ಎಂದು ಸೂಚಿಸಿದರು.
ಮಲ್ಲಾಪುರದ ಕುರ್ನಿಪೇಟೆ ಶಾಲಾ ಆವರಣದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಾಣ ಕುರಿತು ನಿರಾಕ್ಷೇಪಣೆ ಪತ್ರ ನೀಡದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲ್ಲೂಕು ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ತಹಶೀಲ್ದಾರ ನಿಶ್ಚಲ್ ನರೋನಾ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತಾ, ಇಒ ವೀರನಗೌಡ ಏಗನಗೌಡರ, ಪೌರಾಯುಕ್ತ ಜಗದೀಶ್ ಹುಲಗಜ್ಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.