ADVERTISEMENT

ಹೊನ್ನಾವರದ ಕೆಳಗಿನೂರು: ವಾಹನಕ್ಕೆ ಸಿಲುಕಿ ಕೋತಿಗಳು ಸಾವು

ವನ್ಯಜೀವಿ ಬಲಿ ನಿಯಂತ್ರಿಸಲು ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 16:12 IST
Last Updated 26 ಸೆಪ್ಟೆಂಬರ್ 2021, 16:12 IST
ಹೊನ್ನಾವರ ತಾಲ್ಲೂಕಿನ ಕೆಳಗಿನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನದ ಕೆಳಗೆ ಸಿಲುಕಿ ಕೋತಿಗಳು ಮೃತಪಟ್ಟಿರುವುದು
ಹೊನ್ನಾವರ ತಾಲ್ಲೂಕಿನ ಕೆಳಗಿನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನದ ಕೆಳಗೆ ಸಿಲುಕಿ ಕೋತಿಗಳು ಮೃತಪಟ್ಟಿರುವುದು   

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ತಾಲ್ಲೂಕಿನ ಕೆಳಗಿನೂರಿನ ಅಬಿತೋಟ ಇಳಿಜಾರು ಪ್ರದೇಶದಲ್ಲಿ ಪದೇಪದೇ ಮಂಗಗಳು ವಾಹನಗಳ ಕೆಳಗೆ ಸಿಲುಕಿ ಸಾಯುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಅಬಿತೋಟದಿಂದ ಆರಂಭವಾಗಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಮಂಗಗಳ ಹಿಂಡು ರಸ್ತೆ ದಾಟುತ್ತವೆ. ಆಗ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಕೈ, ಕಾಲು ಮುರಿದುಕೊಂಡು ಯಾತನೆ ಪಡುತ್ತ ಅರಚುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಆಗಾಗ ಈ ರೀತಿಯ ಘಟನೆಗಳು ಆಗುತ್ತಿದ್ದರೂ ಹಲವರು ಸ್ಪಂದಿಸುತ್ತಿಲ್ಲ. ಕೆಲವರು ಮುತುವರ್ಜಿ ತೋರಿಸಿದರೂ ಬಾಯಿಗೆ ನೀರು ಹಾಕುವಷ್ಟರಲ್ಲಿ ಅವುಗಳ ಉಸಿರು ನಿಂತು ಬಿಡುತ್ತದೆ. ಇಲ್ಲಿ ಪ್ರಾಣಿಗಳನ್ನು ಚಿಕಿತ್ಸೆಗೆ ಸಾಗಿಸಲು ಆಂಬುಲೆನ್ಸ್ ಇಲ್ಲ’ ಎಂದು ಹೊನ್ನಾವರದ ಶ್ರೀಕಾಂತ ಪಟಗಾರ್ ಬೇಸರಿಸುತ್ತಾರೆ.

‘ಅರಣ್ಯ ನಾಶದಿಂದ ಕಾಡಿನ ಪ್ರಾಣಿಗಳು ಆಹಾರ ಅರಸಿ ಹತ್ತಿರದ ತೋಟಗಳಿಗೆ ಬರುತ್ತಿವೆ. ಅದರಲ್ಲೂ ಮಂಗಗಳು ಗುಂಪು ಗುಂಪಾಗಿ ಇರುವುದರಿಂದ ರಸ್ತೆ ದಾಟುವಾಗ ಒಂದರ ಹಿಂದೆ ಒಂದರಂತೆ ಸಾಗುತ್ತವೆ. ಅದೇ ಸಮಯಕ್ಕೆ ಬರುವ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಮೇಲ್ಸೇತುವೆ ನಿರ್ಮಿಸಿ’:

‘ನಿರ್ದಿಷ್ಟ ಪ್ರದೇಶದಲ್ಲೇ ಕೋತಿಗಳ ಹಿಂಡು ರಸ್ತೆ ದಾಟುವ ಕಾರಣ, ಅವುಗಳ ಅನುಕೂಲಕ್ಕಾಗಿ ಸಣ್ಣದಾದ ಮೇಲ್ಸೇತುವೆ ನಿರ್ಮಿಸಬಹುದು’ ಎಂದು ಶ್ರೀಕಾಂತ ಪಟಗಾರ್ ಸಲಹೆ ನೀಡಿದ್ದಾರೆ.

‘ಪ್ರವಾಹದಿಂದ ಆವೃತವಾದ ನಡುಗಡ್ಡೆಯಲ್ಲಿ ಸಿಲುಕಿದ ಮಂಗಗಳು ನದಿಯನ್ನು ದಾಟಿ ಬರಲು ಅನುಕೂಲ ಆಗುವಂತೆ ಬಲೆಯಿಂದ ಹೆಣೆಯಲಾದ ಸೇತುವೆ ನಿರ್ಮಿಸಲಾಗುತ್ತದೆ. ಅದೇ ಮಾದರಿಯನ್ನು ಇಲ್ಲೂ ಅನುಸರಿಸಬಹುದು. ರಸ್ತೆಯ ಅಕ್ಕಪಕ್ಕಗಳಲ್ಲಿ ಪ್ರಾಣಿಗಳು ದಾಟುವ ಪ್ರದೇಶವೆಂದು ಸೂಚನಾ ಫಲಕ ಅಳವಡಿಸಬೇಕು. ಆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.