ಶಿರಸಿ: ಅತಿವೃಷ್ಟಿಯಿಂದ ಉಂಟಾಗುತ್ತಿರುವ ಹಾನಿಗೆ ಚಿಂತೆಗೀಡಾಗಿದ್ದ ರೈತರಿಗೆ ಮಂಗಗಳ ಹಾವಳಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಬೆಳವಣಿಗೆ ಹಂತದಲ್ಲಿ ಜೋಳದ ಸಸಿ, ಅಡಿಕೆ ಮಿಳ್ಳೆಗಳನ್ನು ಆಹಾರವಾಗಿಸಿಕೊಂಡಿರುವ ಮಂಗಗಳು ನಿತ್ಯವೂ ಹತ್ತಾರು ಎಕರೆ ಪ್ರದೇಶಕ್ಕೆ ಲಗ್ಗೆ ಇಟ್ಟು ಅವುಗಳನ್ನು ಹಾನಿ ಮಾಡುತ್ತಿವೆ.
ತಾಲ್ಲೂಕಿನ ಪೂರ್ವಭಾಗದ ಬನವಾಸಿ, ಕಲಕರಡಿ, ಮಧುರವಳ್ಳಿ, ಅಂಡಗಿ, ಹೆಬ್ಬತ್ತಿ ಭಾಗದಲ್ಲಿ ಮೆಕ್ಕೆಜೋಳದ ಗದ್ದೆಗೆ ಮಂಗಗಳ ಗುಂಪು ಲಗ್ಗೆ ಇಡುತ್ತಿದ್ದರೆ, ಪಶ್ಚಿಮ ಭಾಗದ ಅಡಿಕೆ ತೋಟದಲ್ಲಿ ನೂರಾರು ಕ್ವಿಂಟಲ್ ಅಡಿಕೆ ಮಿಳ್ಳೆ ಕೋತಿ ದಾಳಿಗೆ ತುತ್ತಾಗಿ ನಾಶವಾಗಿದೆ.
‘ಗಾಳಿ ಮಳೆಗೆ ಅಡಿಕೆ ಮರಗಳು ಮುರಿದು ಬೀಳುತ್ತಿದೆ. ಈ ಸಮಸ್ಯೆಯ ನಡುವೆ ಇನ್ನೂ ಬಲಿತಿರದ ಎಳೆ ಅಡಿಕೆ ಮಿಳ್ಳೆಗಳನ್ನು ಮಂಗಗಳ ಹಿಂಡು ತಿನ್ನುತ್ತಿರುವುದರಿಂದ ಚಿಂತೆಗೀಡಾಗಿದ್ದೇವೆ’ ಎನ್ನುತ್ತಾರೆ ಮರ್ಲಮನೆಯ ವಿನಾಯಕ ಹೆಗಡೆ.
‘ಮುಂಗಾರು ವಿಳಂಬವಾದ ಪರಿಣಾಮ ಮೆಕ್ಕೆಜೊಳ ಬಿತ್ತನೆಗೆ ತೊಂದರೆಯಾಯಿತು. ನಂತರ ಏಕಾಏಕಿ ಸುರಿದ ಅತಿವೃಷ್ಟಿಯಿಂದ ಸಸಿಗಳಿಗೆ ಗೊಬ್ಬರ ಸಕಾಲಕ್ಕೆ ನೀಡಲಾಗದೆ ಸುಳಿರೋಗ ಬಾಧೆ ಕಾಡಿತು. ಈಗ ಉಳಿದ ಅಲ್ಪಸ್ವಲ್ಪ ಸಸಿಗಳನ್ನು ಮಂಗಗಳು ಮುರಿದು ತಿನ್ನುತ್ತಿವೆ’ ಎಂದು ರೈತ ಸಂತೋಷ ಕಲಕರಡಿ ಬೇಸರ ತೋಡಿಕೊಂಡರು.
‘ಮಂಗಗಳ ಉಪಟಳದಿಂದ ವ್ಯಾಪಕ ಪ್ರಮಾಣದ ನಷ್ಟ ಪ್ರತಿ ವರ್ಷ ಉಂಟಾಗುತ್ತಿದೆ. ಆದರೆ ಈ ನಷ್ಟಕ್ಕ ಪರಿಹಾರ ನೀಡುತ್ತಿಲ್ಲ. ಇದರಿಂದ ರೈತ ಸಮೂಹ ವಂಚಿತವಾಗುತ್ತಿದೆ’ ಎಂದು ದೂರಿರುವ ರೈತರು, ‘ಸರ್ಕಾರ ಮಂಗಗಳ ಉಪಟಳದಿಂದ ಉಂಟಾದ ನಷ್ಟಕ್ಕೆ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.